ಬಜೆಟ್ ನಲ್ಲಿ ಹೊಸ ವಸತಿ ಯೋಜನೆಗಳು ಅಸಂಭವ: ಯುಟಿ ಖಾದರ್

ಜುಲೈ 5 ರಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಂಡಿಸಲಿರುವ ಸಮ್ಮಿಶ್ರ ಸರ್ಕಾರದ ಬಜೆಟ್ ನಲ್ಲಿ ಹೊಸ ವಸತಿ ಯೋಜನೆಗಳ ಘೋಷಣೆ ಅಸಂಭವ ಎಂದು ವಸತಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಯು ಟಿ ಖಾದರ್
ಯು ಟಿ ಖಾದರ್

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ  ಹೇಳಿಕೆ ನೀಡಿದ ನಂತರ  ವಸತಿ ಸಚಿವ ಯು. ಟಿ. ಖಾದರ್   ತಾಲೂಕ್ ಪಂಚಾಯಿತಿ ಅಧ್ಯಕ್ಷರ ಜೊತೆ ಸಭೆ ನಡೆಸಿದ್ದು,  ವಸತಿ ಯೋಜನೆಗಳ ಅನುಷ್ಠಾನ  ಕುರಿತಂತೆ ಚರ್ಚೆ ನಡೆಸಿದ್ದಾರೆ.

ವಸತಿ  ಸಚಿವಾಲಯದ ದೂರದೃಷ್ಟಿ  ಕುರಿತಂತೆ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ  ಮಾತನಾಡಿದ ಅವರು,  ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಸತಿ ಸಚಿವರಾಗಿ, ನಿಮ್ಮ ದೃಷ್ಟಿ ಮತ್ತು ಗುರಿ  ಏನು ?

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಎಲ್ಲರಿಗೂ ಸೂರು ಒದಗಿಸುವುದು ಅಂತಿಮ ಉದ್ದೇಶವಾಗಿದೆ. ಆದರೆ. ಈಗ ಗ್ರಾಮೀಣ  ವಸತಿ ಯೋಜನೆಗಳು ಮಾತ್ರ ಪರಿಣಾಮಕಾರಿಯಾಗಿ ಜಾರಿಗೊಂಡಿವೆ.  ಶೇ. 40 ರಷ್ಟು ಗ್ರಾಮೀಣ ಜನಸಂಖ್ಯೆ  ನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದೆ. ಮುಂದಿನ 10 ವರ್ಷಗಳಲ್ಲಿ ಇದು ಶೇ. 50 ರ ಸನ್ನಿಹಕ್ಕೆ ಬರಲಿದೆ. ಗ್ರಾಮೀಣ ವಸತಿ ಜೊತೆಗೆ ನಗರ ಪ್ರದೇಶದಲ್ಲಿಯೂ ರಿಯಾಯಿತಿ ದರದಲ್ಲಿ ವಸತಿ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರಸರ್ಕಾರದ ಸಹಾಯ ಪಡೆಯುತ್ತೇವೆ.

ಬಜೆಟ್ ನಲ್ಲಿ ನಿಮ್ಮ ಪ್ರಸ್ತಾವನೆಗಳು ಏನು ? ಹೊಸ ಯೋಜನೆಗಳು ಇದೆಯಾ ?

ಮುಖ್ಯಮಂತ್ರಿಗಳ ಮುಂದೆ ಅನೇಕ ಪ್ರಸ್ತಾವನೆಗಳನ್ನು ಮಂಡಿಸಿದ್ದೇನೆ. ಆದರೆ. ಕಾಯಬೇಕಾಗಿದೆ. ರೈತರ ಸಾಲ ಮನ್ನಾ ಘೋಷಣೆಯಿಂದಾಗಿ  ಈ ಬಾರಿ ಹೆಚ್ಚಿನ ವಸತಿ   ಯೋಜನೆಗಳು ಕಾಣಲು ಸಾಧ್ಯವಿಲ್ಲ.  ಮುಂದಿನ ವರ್ಷದಿಂದ ಹೊಸ ಯೋಜನೆಗಳು ಜಾರಿಯಾಗಲಿವೆ . ವಸತಿ ಯೋಜನೆ ಅನುದಾನ ಕಡಿಮೆ  ಆಗಲಿದೆ ಎಂದು ನಿರೀಕ್ಷಿಸಿಲ್ಲ.

ಪರಿಶಿಷ್ಟ ಜಾತಿ, ಪಂಗಡ ಉಪ ಯೋಜನೆಯನ್ನು ಸಚಿವಾಲಯ ಹೇಗೆ ಅನುಷ್ಠಾನಗೊಳಿಸುತ್ತಿದೆ ?

ಈ ಸಮುದಾಯದರಿಗಾಗಿಯೇ ಪರ್ಯಾಯ ಸಾಪ್ಟ್ ವೇರ್ ಸಿದ್ದಪಡಿಸಲಾಗಿದೆ. ಮನೆಗೆ ಬರುವ ಬೇಡಿಕೆಗೆ ತಕ್ಕಂತೆ ಯೋಜನೆ ರೂಪಿಸಲಾಗುತ್ತಿದೆ. ಆನ್ ಲೈನ್ ಮೂಲಕವೇ ಅವರು ಅರ್ಜಿ ಸಲ್ಲಿಸಬೇಕಾಗುತ್ತದೆ. ಅಲ್ಲಿ ಆಯ್ಕೆ ಪ್ರಕ್ರಿಯೆಗಾಗಿ ಕಾಯಬೇಕಾದ ಪರಿಸ್ಥಿತಿ ಇರುವುದಿಲ್ಲ.ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದವರಿಗೆ ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಮನೆ ನೀಡಲಾಗುತ್ತದೆ.

ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನೆಡೆಗೆ ಕಾರಣ ಏನು ?

ಕೊನೆ ಕ್ಷಣದಲ್ಲಿ ಮತದಾರರ ಒಲವಿನಲ್ಲಿ ಬದಲಾವಣೆಯಾಗಿದೆ. ಹಲವು ಅಭಿವೃದ್ದಿ , ಜನಪರ ಕಾರ್ಯಕ್ರಮಗಳ ಹೊರತಾಗಿಯೂ  ಕಾಂಗ್ರೆಸ್ ಗೆ ಬೆಂಬಲ ವ್ಯಕ್ತವಾಗಿಲ್ಲ. ಈ ಬಗ್ಗೆ ಆತ್ಮಾವಲೋಕನ ನಡೆಸಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮತ್ತು ಅಸಮ್ಮತಿ ಇನ್ನೂ ಅಸ್ತಿತ್ವದಲ್ಲಿದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾ ?

ಯಾವುದೇ ಸಮ್ಮಿಶ್ರ ಸರ್ಕಾರದಲ್ಲೂ ಇಂತಹ ಸಮಸ್ಯೆಗಳು ಇದ್ದೇ ಇರುತ್ತದೆ. ಇದು ಭಾರತದ ಪ್ರಜಾಪ್ರಭುತ್ವದ ಲಕ್ಷಣ. ಪಕ್ಷದ ಹಿರಿಯ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಸಚಿವನಾಗಿ ಈ ಸರ್ಕಾರ ಐದು ವರ್ಷ ಪೂರೈಸಲಿದೆ ಎಂಬ ಭರವಸೆ ಇದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಮುಖ್ಯಸ್ಥರೊಂದಿಗೆ ಸಹಕಾರದಿಂದ  ಕೆಲಸ ನಿರ್ವಹಿಸುತ್ತೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com