ಬೆಂಗಳೂರು : ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್ ರಾಜ್ಯಪಾಲರಿಗೆ ನೀಡಿರುವ ಶಾಸಕರ ಪಟ್ಟಿಯಲ್ಲಿ ಕೆಲ ಶಾಸಕರ ಸಹಿಯನ್ನು ನಕಲು ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಎಲ್ಲಾ ಶಾಸಕರು ಬೆಂಗಳೂರಿಗೆ ಆಗಮಿಸಿ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳುವ ಮುಂಚಿತವಾಗಿಯೇ ಹೇಗೆ ಶಾಸಕರ ಸಹಿ ಸಂಗ್ರಹಿಸಲು ಸಾಧ್ಯವಾಯಿತು ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದ್ದು, ಇದು ನಕಲಿ ಎಂಬುದು ಇದರಿಂದಾಗಿಯೇ ಅರ್ಥವಾಗುತ್ತದೆ ಎಂದು ಬೆಂಗಳೂರಿನಲ್ಲಿಂದು ಆರೋಪಿಸಿದ್ದಾರೆ.
ಶಾಸಕರ ಸಹಿ ಮತ್ತಿತರ ದಾಖಲೆಗಳನ್ನು ನಕಲು ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಕೆಲಸವೇನೆಲ್ಲಾ, ಮಣಿಪುರ ರಾಜ್ಯದಲ್ಲೂ ಆತಂತ್ರ ವಿಧಾನಸಭೆ ಸೃಷ್ಠಿಯಾದಾಗಲೂ ಕಾಂಗ್ರೆಸ್ ಮಣಿಪುರ ಫೀಪಲ್ಸ್ ಪಾರ್ಟಿ ಶಾಸಕರ ನಕಲಿ ಸಹಿಯನ್ನು ಸೃಷ್ಟಿಸಲಾಗಿತ್ತು. ಆದಾಗ್ಯೂ, ಹಳೆಯ ಪಕ್ಷದ ಸಾಚಾತನವನ್ನು ಬಯಲಿಗೆಳೆಯಲಾಗಿತ್ತು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ ಎಂದು ಅವರು ಆರೋಪಿಸಿದರು.
ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸಿದ ರಾಜ್ಯಪಾಲ ವಜೂಭಾಯಿ ವಾಲಾ ಅವರ ಕ್ರಮವನ್ನು ಸಮರ್ಥಿಸಿಕೊಂಡ ಜಾವಡೇಕರ್, ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರಲಿಲ್ಲ. ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಜರಿದಿದ್ದರು. ಆದರೆ, ಈಗ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಿರುವುದು ಸರಿಯಾದ ಕ್ರಮವಾಗಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿಹಾಕಲಾಗಿದ್ದು, ಅವರ ಕುಟುಂಬ ಸಂಪರ್ಕ ಸಿಗದಂತೆ ಮಾಡಲಾಗಿದೆ. ನ್ಯೂಸ್ ಚಾನೆಲ್ ವೀಕ್ಷಿಸಲು ಸಹ ಅವಕಾಶ ನೀಡಿಲ್ಲ , ರಾಹುಲ್ ಗಾಂಧಿ ಬಿಜೆಪಿ ಕುರಿತು ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜಾವಡೇಕರ್ ಹೇಳಿದರು.
Advertisement