ಅತಿಯಾದ ಆತ್ಮವಿಶ್ವಾಸ, ಪಕ್ಷದ ನಾಯಕರು ಮಾಡಿದ್ದ ತಪ್ಪುಗಳಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಬಳ್ಳಾರಿಯಲ್ಲಿ ಬಿಜೆಪಿ ಗೆಲವು ಸಾಧಿಸಿದ್ದೇ ಆಗಿದ್ದರೆ, ಸರ್ಕಾರ ರಚನೆ ಮಾಡಲು ಸುಲಭವಾಗುತ್ತಿತ್ತು. ಸುರೇಶ್ ಬಾಬು ಸೇರಿದಂತೆ ಹಲವು ನಾಯಕರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದ್ದರು. ಅಲ್ಲದೆ, ಟಿಕೆಟ್ ನೀಡುವಲ್ಲಿಯೂ ತಪ್ಪುಗಳಾಗಿತ್ತು. ಸರಿಯಾದ ಅಭ್ಯರ್ಥಿಗಳನ್ನು ಗುರ್ತಿಸಿ ಟಿಕೆಟ್ ನೀಡುವಲ್ಲಿ ಪಕ್ಷ ವಿಫಲಗೊಂಡಿತ್ತು. ಅತ್ಯಂತ ಕಡಿಮೆ ಅಂತರಹಿಂದ ಸುರೇಶ್ ಬಾಬು ಅವರು ಸೋಲು ಕಂಡಿದ್ದಾರೆ. ಒಂದು ವೇಳೆ ಅವರು ಗೆದ್ದಿದ್ದೇ ಆಗಿದ್ದರೆ, ಪಕ್ಷಕ್ಕೆ ಸಹಾಯವಾಗುತ್ತಿದ್ದು, ಹಗರೀಬೊಮ್ಮನಹಳ್ಳಿ ಹಾಗೂ ಹಡಗಲಿಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ಕುಮಾರಸ್ವಾಮಿಯವರು ಈಡೇರಿಸಬೇಕು. ಒಂದು ವೇಳೆ ಆಗದೇ ಹೋದರೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದಿದ್ದಾರೆ.
ಕುಮಾರಸ್ವಾಮಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ತೃತೀಯ ರಂಗದ ನಾಯಕರಿಗೆ ಪ್ರಾದೇಶಿಕ ಹಿತಾಸಕ್ತಿಯೇ ಮುಖ್ಯ ಹೊರತು, ರಾಷ್ಟ್ರೀಯ ಹಿತಾಸಕ್ತಿಗಳಲ್ಲ. ಅವರೆಲ್ಲರೂ ಒಂದುಗೂಡಲೇ ಸಾಧ್ಯವೇ ಇಲ್ಲ. ತೃತೀಯ ರಂಗ ಒಂದಾಗುವುದು ಎಂದರೆ ತಕ್ಕಡಿಯಲ್ಲಿಟ್ಟು ಕಪ್ಪೆಗಳನ್ನು ತೂಗಿದಂತೆ ಎಂದು ವ್ಯಂಗ್ಯವಾಡಿದ್ದಾರೆ.