ಮೂವರು ಕಾಂಗ್ರೆಸ್ ಶಾಸಕರಿಂದಾಗಿ ಡಿಕೆಶಿಗೆ ಸಂಕಷ್ಟ: ಸಿ.ಎಂ. ಲಿಂಗಪ್ಪ
ಕನಕಪುರ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ವಿರುದ್ಧ ಆರ್ಥಿಕ ಪ್ರಕರಣ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ವಿನಾ ಕಾರಣ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕನಕಪುರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ರಾಮನಗರದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರ ವಿನಾಕಾರಣ ಶಿವಕುಮಾರ್ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ. ಗುಜರಾತ್ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ಬಂದಿದ್ದ ವೇಳೆ ಅಮಿತ್ ಷಾ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆದ ಸಂಭಾಷಣೆಯನ್ನು ನಾನು ಬಹಿರಂಗಪಡಿಸಿದ್ದೆ. ಆದರೆ ಆಗನನ್ನ ಮಾತನ್ನು ಯಾರೂ ನಂಬಿರಲಿಲ್ಲ ಎಂದರು.
ಅಮಿತ್ ಶಾ ರಾತ್ರಿ 11.30ರ ಸಮಯದಲ್ಲಿ ಕರೆ ಮಾಡಿದಾಗ ನಾನು ಜೊತೆಯಲ್ಲೇ ಇದ್ದೆ. ತಮಗೆ ಬೇಕಾಗಿರುವ ಕಾಂಗ್ರೆಸ್ ನ ಮೂವರು ಶಾಸಕರನ್ನು ಬಿಟ್ಟುಬಿಡುವಂತೆ ಶಾ ತಿಳಿಸಿದರು. ಅದಕ್ಕೆ ಅವರು ಸೊಪ್ಪು ಹಾಕಲಿಲ್ಲ. ಮೂರು ಜನ ಶಾಸಕರನ್ನು ಬಿಟ್ಟು ಕಳುಹಿಸಿದ್ದರೆ ಡಿ.ಕೆ. ಶಿವಕುಮಾರ್ ಗೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದರು.
ಅಮಿತ್ ಶಾ ಆವತ್ತಿನಿಂದಲೇ ಡಿ.ಕೆ. ಶಿವಕುಮಾರ್ ವಿರುದ್ಧ ಜಿದ್ದಿಗೆ ಬಿದ್ದಿದ್ದಾರೆ. ತಮಗೆ ಎದುರಾಗಿ ನಿಂತ ಶಿವಕುಮಾರ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ. ಹಾಗೊಂದು ಒಂದು ವೇಳೆ ಆರ್ಥಿಕ ಅಪರಾಧ ಮಾಡಿದ್ದರೆ ಇಡೀ ಕುಟುಂಬದವರಿಗೆಲ್ಲ ಕಿರುಕುಳ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಭ್ರಷ್ಟರು, ಆರ್ಥಿಕ ಅಪರಾಧ ಮಾಡಿರುವವರು ಕೇವಲ ಕಾಂಗ್ರೆಸ್ ನವರು ಮಾತ್ರ ಎಂಬ ಸಂದೇಶ ಕೊಡಲು ಬಿಜೆಪಿ ಮುಂದಾಗಿರುವುದು ಸರಿಯಲ್ಲ. ಬಿಜೆಪಿ ಧೋರಣೆ ಸಹಿಸಲು ಸಾಧ್ಯವೇ ಇಲ್ಲ. ಇಂತಹ ದ್ವೇಷ ರಾಜಕಾರಣದ ಚಾಳಿಯನ್ನು ಬಿಜೆಪಿ ಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಿ.ಎಂ. ಲಿಂಗಪ್ಪ ಎಚ್ಚರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ