ವೋಟಿಗಾಗಿ ನೋಟು: ಹಳೇ ಮೈಸೂರಿನಲ್ಲಿ ಮತದಾರರಿಗೆ ಬಂಪರ್ ಗಿಫ್ಟ್ ನೀಡಿದ ಮೂರು ಪಕ್ಷಗಳು
ಮೈಸೂರು: ಉಪ ಚುನಾವಣೆ ಹಿನ್ನೆಲೆ ಹಳೇ ಮೈಸೂರಿನಲ್ಲಿ ಮೂರೂ ರಾಜಕೀಯ ಪಕ್ಷಗಳು ಭರ್ಜರಿ ಗಿಫ್ಟ್ ಗಳನ್ನು ನೀಡಿದ್ದು, ಮತದಾರರ ಒಲಿಸಿಕೊಳ್ಳಲು ಶತಾಯಗತಾಯ ಯತ್ನಗಳನ್ನು ಮಾಡಿವೆ.
ಕೆ.ಆರ್.ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಯತ್ನಗಳನ್ನು ನಡೆಸಿದ್ದು, ಮತದಾರರಿಗೆ ರೂ.5,000 ಗಿಫ್ಟ್ ಕೂಪನ್ ಗಳನ್ನು ನೀಡಿವೆ. ಗಿಫ್ಟ್ ಕೂಪನ್ ಪಡೆದ ಜನರು ಆಯ್ದ ಅಂಗಡಿಗಳಿಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ. ಇದರಂತೆ ಮತ್ತೊಂದು ಪಕ್ಷ ಒಂದು ಮತಕ್ಕೆ ರೂ.300 ನೀಡಿದೆ. ಇನ್ನು ಕೆಲ ಗ್ರಾಮಗಳಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಸೀರೆಗಳನ್ನು ನೀಡಲಾಗಿದೆ. ಇನ್ನು ಕೆಲವೆಡೆ ಉದ್ಯೋಗಕ್ಕೆ ತೆರಳುವವರಿಗೆ ರೂ.200 ಬೋನಸ್ ನಂತೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಉಪ ಚುನಾವಣೆ ಹತ್ತಿರ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಮತದಾರರನ್ನು ಸೆಳೆಯುವ ಸಲುವಾಗಿ ಕೆ.ಆರ್.ಪೇಟೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮತದಾರರನ್ನು ಸೆಳೆಯಲು ಘೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ