ಬೆಂಗಳೂರು: ಸಚಿವ ಸ್ಥಾನ ಸಿಗದೆ ಕಾಂಗ್ರೆಸ್ ನಾಯಕರ ವಿರುದ್ದ ಮುನಿಸಿಕೊಂಡಿರುವ ಹಿರೇಕೆರೂರ್ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಇಂದು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ನಿವಾಸದಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ಗೈರು ಹಾಜರಾದ ಬಗ್ಗೆ ಬಿ.ಸಿ. ಪಾಟೀಲ್ ಸ್ಪಷ್ಟೀಕರಣ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್ , ಪಕ್ಷ ತೊರೆಯುವ ಯಾವ ಉದ್ದೇಶವೂ ಇಲ್ಲ ಬಂಡಾಯಗಾರರ ಜೊತೆ ಸೇರುವುದಿಲ್ಲ ಸ್ಪಷ್ಟಪಡಿಸಿದ್ದಾರೆ.
ನಾನು ಪಕ್ಷದಲ್ಲೆ ಉಳಿಯುತ್ತೇನೆ ಯಾವುದೆ ಕಾರಣಕ್ಕೂ ಜೆಡಿ (ಎಸ್) -ಕಾಂಗ್ರೆಸ್ ಒಕ್ಕೂಟದ ಸರ್ಕಾರವನ್ನು ಉರುಳಿಸಲು ಬೇರೆಯವರ ಜೊತೆಗೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಸೇರುವ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರೂ ನನಗೆ ಸಚಿವ ಪದವಿ ಸಿಕ್ಕಿಲ್ಲ ಎಂಬ ಅಸಮಾಧಾನವಿದೆ. ಆದರೆ ಪಕ್ಷ ತೊರೆಯುವ ಯಾವ ಉದ್ದೇಶವಿಲ್ಲ ಎಂದು ಬಿ. ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Advertisement