ಬೆಂಗಳೂರು: ಸ್ಟೀಲ್ ಬ್ರಿಡ್ಜ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಾಹನ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ಉತ್ತಮ ಯೋಜನೆಯಾಗಿರುವ ಉಕ್ಕು ಸೇತುವೆ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್ ವರೆಗೆ ಉಕ್ಕು ಸೇತುವೆ ನಿರ್ಮಾಣ ಅನೀವಾರ್ಯವಾಗಿದೆ. ಬಹಳಷ್ಟು ಪ್ರಮಾಣದ ದಟ್ಟಣೆ ಇದ್ದರೂ ಏಕೆ ಸ್ಥಗಿತಗೊಳಿಸಲಾಯಿತು ಎಂಬುದು ತಿಳಿದಿಲ್ಲ. ಈ ಸಂಬಂಧ ಸಾರ್ವಜನಿಕರ ಸಲಹೆ ಸೂಚನೆ ಪಡೆದು ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸ್ಟೀಲ್ ಬ್ರಿಡ್ಜ್ ಯೋಜನೆ ಭಾರಿ ವಿವಾದ ಹುಟ್ಟುಹಾಕಿತ್ತು. ಒಟ್ಟು 6.7 ಕಿ.ಮೀ ಉದ್ದದ ಈ ಯೋಜನೆಗೆ 1800 ಕೋಟಿ ರೂ ಮೀಸಲಿಡಲಾಗಿತ್ತು, ಈ ಯೋಜನೆಯಿಂದ 817 ಮರಗಳು ಆಹುತಿಯಾಗುತ್ತಿದ್ದವು, ಹೀಗಾಗಿ ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸ್ಟೀಲ್ ಬ್ರಿಡ್ಜ್ ಮೇಲೆ ಪ್ರಯಾಣಿಸುವವರು ಟೋಲ್ ನೀಡಬೇಕು ಎನ್ನುವ ಮಾತುಗಳೂ ಕೇಳಿಬಂದಿತ್ತು.
ಅಲ್ಲದೇ, ಹೈಕಮಾಂಡ್ಗೆ ಕಪ್ಪಕಾಣಿಕೆ ಕಿಕ್ ಬ್ಯಾಕ್, ಸೇರಿ ಸರಣಿ ಆರೋಪಗಳಿಗೆ ಈ ಉಕ್ಕಿನ ಸೇತುವೆ ಗುರಿಯಾಗಿತ್ತು. ಕಳೆದ ವಿಧಾನಸಭೆಯ ಚುನಾವಣೆ ಪ್ರಚಾರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸ್ಟೀಲ್ ಬ್ರಿಡ್ಜ್ ಕಿಕ್ ಬ್ಯಾಕ್ ಪ್ರಕರಣವನ್ನು ಉಲ್ಲೇಖಿಸಿದ್ದರು.ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಹಿಂದಿನ ಸರ್ಕಾರ ಕೈಬಿಟ್ಟಿತ್ತು.
Advertisement