'ನನ್ನ ಮುಂದೆ ಗುಳ್ಳೆ ನರಿ ಹೋಯ್ತು, ಸರ್ಕಾರ ಉಳಿಯುತ್ತೆ ಎಂದುಕೊಂಡೆ: ಫೋನ್ ಮಾಡಿ ನೋಡಿದೇ ಅಷ್ಟರಲ್ಲಿ ಎಂಟಿಬಿ ಹಾರಿ ಹೋಗಿದ್ದ'

ಚಿಕ್ಕ ತಿರುಪತಿಯಲ್ಲಿ ದೇವರಿಗೆ ಕೈಮುಗಿದು ಮೈತ್ರಿ ಸರ್ಕಾರ ಉಳಿದರೆ ಒಂದು ಕೋಟಿ ರೂ. ಅನುದಾನ ಕೊಡಿಸುತ್ತೇನೆ ಎಂದು ಹರಕೆ ಹೊತ್ತು ಬಂದೆ. ಮಾರ್ಗ ಮಧ್ಯೆ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು,...
ವಿಧಾನಸಭೆಯಲ್ಲಿ  ಶಿವಲಿಂಗೇಗೌಡ ಭಾಷಣ
ವಿಧಾನಸಭೆಯಲ್ಲಿ ಶಿವಲಿಂಗೇಗೌಡ ಭಾಷಣ
Updated on
ಬೆಂಗಳೂರು: ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಸದನದಲ್ಲಿ ಮಧ್ಯಾಹ್ನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬಳಿಕ ಮಾತಿಗೆ ನಿಂತವರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡುವ ಮೂಲಕ ಸದನದ ಸಮಯವನ್ನು ಎಳೆಯುವುದರಲ್ಲಿ ಯಶಸ್ವಿಯಾದರು. 
ಚಿಕ್ಕ ತಿರುಪತಿಯಲ್ಲಿ ದೇವರಿಗೆ ಕೈಮುಗಿದು ಮೈತ್ರಿ ಸರ್ಕಾರ ಉಳಿದರೆ ಒಂದು ಕೋಟಿ ರೂ. ಅನುದಾನ ಕೊಡಿಸುತ್ತೇನೆ ಎಂದು ಹರಕೆ ಹೊತ್ತು ಬಂದೆ. ಮಾರ್ಗ ಮಧ್ಯೆ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು, ಶುಭ ಶಕುನ ಸರ್ಕಾರ ಉಳಿದುಕೊಳ್ಳುತ್ತದೆ ಎಂದು ತಿಳಿದೆ, ಹೀಗಾಗಿ ತಕ್ಷಣ ನಮ್ಮ ಶಾಸಕ ಬಾಲಕೃಷ್ಣಗೆ ಫೋನ್ ಮಾಡಿ ಹೇಳಿದೆ. ನನ್ನ ಮುಂದೆ ಗುಳ್ಳೆನರಿ ಹೋಯಿತು, ಕುಮಾರಣ್ಣನ ಸರ್ಕಾರ ಉಳಿಯತು ಎಂದೇ,  ಆಗಲೇ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹಾರಿದ ಎಂದು ಆಕಡೆಯಿಂದ ಉತ್ತರ ಬಂದಿತು. ನನ್ನ ಗುಳ್ಳೆ ನರಿ ಶಾಸ್ತ್ರ ಸುಳ್ಳಾಯಿತು ಎಂದರು ಸದನ ನಗೆಗಡಲಿನಲ್ಲಿ ತೇಲಿತು.
ನಮ್ಮನ್ನು ಕಂಡರೆ ಜನರು ಚಂಬಲ್ ಡಕಾಯಿತರಂತೆ ನೋಡುತ್ತಿದ್ದಾರೆ. ಜನ ಇರಲಿ, ನಮ್ಮ ಹೆಂಡತಿ, ಮಕ್ಕಳು ಸಹ ನಮ್ಮನ್ನು ನೋಡಿ ಹೆದರುವಂತಾಗಿದೆ' ಎಂದು ಹೇಳಿದರು. ಆಗ ಸ್ಪೀಕರ್ ರಮೇಶ್ ಕುಮಾರ್ ಮಧ್ಯ ಪ್ರವೇಶಿಸಿ 'ಪಾಪ ಡಕಾಯಿತರಿಗೆ ಅವಮಾನ ಮಾಡಬೇಡಿ' ಎಂದಾಗ ಸದನ ನಗೆಗಡಲಲ್ಲಿ ತೇಲಿತು. 
ಶ್ರೀಮಂತ ಪಾಟೀಲ್ ಅಜ್ಜ ಬಹಳ ಮುಗ್ಧ 'ಪಾಪ ಶ್ರೀಮಂತ ಪಾಟೀಲ್ ಅಜ್ಜ ಬಹಳ ಮುಗ್ಧ. ಆಯಪ್ಪನಿಗೆ ಏನೂ ಗೊತ್ತಿಲ್ಲ. ಅಂತಹ ವ್ಯಕ್ತಿಯನ್ನು ಇವರು ಹೊಡ್ಕೊಂಡು ಹೋದರಲ್ಲ, ಅದು ಸರಿನಾ? ಆ ಅಜ್ಜ ರೆಸಾರ್ಟ್‌ನಲ್ಲಿ ನಮ್ಮ ಜೊತೆ ಇದ್ದರು. ರೆಸಾರ್ಟ್‌ನಿಂದಲೇ ಅವರನ್ನು ಹಾರಿಸಿಕೊಂಡು ಹೋದರಲ್ಲಾ. ಬಹುಶಃ ಇಂತಹ ಐಡಿಯಾ ಇವರಿಗೆ ಬಿಟ್ಟರೆ ಇನ್ನು ಯಾರಿಗೂ ಬರಲು ಸಾಧ್ಯವಿಲ್ಲ. ಈಗಾಗಲೇ 15 ಶಾಸಕರನ್ನು ಹಾರಿಸಿಕೊಂಡು ಹೋಗಿದ್ದರಲ್ಲ, ಅವರಷ್ಟೇ ಸಾಕಾಗಿರಲಿಲ್ಲವಾ ನಿಮಗೆ ಈ ಸರ್ಕಾರ ಬೀಳಿಸಲು. ಇನ್ನು ಒಬ್ಬ ಶಾಸಕರನ್ನು ಏಕೆ ಹಾರಿಸಿಕೊಂಡು ಹೋದಿರಿ?' ಎಂದು ಬಿಜೆಪಿ ನಾಯಕರನ್ನು ಕೆಣಕಿದರು. 
ಮದ್ರಾಸ್‌ನಲ್ಲಿ ಶ್ರೀಮಂತ್ ಪಾಟೀಲ್ ಅವರ ಹಾರ್ಟು ಜುಂಜುಂ ಅಂತಾ? ಬಿಜೆಪಿಯವರು ಹಿಡಿದುಕೊಂಡು ಟ್ರೀಟ್‌ಮೆಂಟ್ ಕೊಟ್ಟರಾ? ಈ ಅಜ್ಜಂಗೆ ಬಾಂಬೆಯಲ್ಲಿಯೇ ಟ್ರೀಟ್‌ಮೆಂಟ್‌ ಬೇಕಿತ್ತಾ? ಈ ಫೋಟೊ ತೆಗೆದು ನೋಡಿ. ಇದು ಆಸ್ಪತ್ರೆಯ ಫೋಟೊ ಅಲ್ಲ. ಕನ್ನಡಕ ಬೇರೆ ಐತೆ' ಎಂದು ವ್ಯಂಗ್ಯವಾಗಿ ಹೇಳಿದರು. ಸಿಎಂ ಹಾಗೂ ಆಡಳಿತ ಪಕ್ಷದ ನಾಯಕರಿಗೆ ಕೊಡಬಾರದ ನೋವು ಕೊಟ್ಟಿದ್ದಾರೆ. ನೀವು ಉಪಯೋಗಿಸಿದ ತಲೆಗಳೆಲ್ಲ ನಿಮಗೇ ಉಲ್ಟಾ ಹೊಡೆಯುತ್ತವೆ. 2018ರ ವಿಧಾನಸಭೆಯ ಆಯ್ಕೆ ಮತ್ತೆ ಬರುವಂತೆ ಆಗಬಾರದು. ಈ ರೀತಿ ಫಲಿತಾಂಶದಿಂದಾಗಿ ಯಾವುದೇ ಶಾಸಕರು ಅಭಿವೃದ್ಧಿ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ ಎಂದರು. 
ಸ್ಪಷ್ಟ ಬಹುಮತ ಹೊಂದಿರದೆ ಇದ್ದರೂ ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ನಾವು ಅಧಿಕಾರಕ್ಕೆ ಬಂದ ಗಳಿಗೆಯಿಂದ ಇದುವರೆಗೂ ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡಲಿಲ್ಲ. ಇಲ್ಲಿರುವ ಯಾವ ಶಾಸಕರೂ ನೆಮ್ಮದಿಯಿಂದ ಇಲ್ಲ. ಅನಾವಶ್ಯಕ ಕಾರಣ ನೀಡಿ ಸರ್ಕಾರ ಕೆಡುವಲು ಪ್ರಯತ್ನಿಸುತ್ತಿದ್ದಾರೆ, ಬಹುಮತ ಇಲ್ಲ ಎಂದ ಮೇಲೆ ನಾವು ರಾಜಿನಾಮೆ ಕೊಟ್ಟು ಮನೆಗೆ ಹೋಗದು ಗೊತ್ತು ಎಂದು ಮಾರ್ಮಿಕವಾಗಿ ನುಡಿದರು.
ಶಿವಲಿಂಗೇಗೌಡ ಮಾತು ನಿಲ್ಲಿಸುತ್ತಾರೆ ಎಂದು ತಾಳ್ಮೆಯಿಂದ ಬಿಜೆಪಿ ನಾಯಕರು ಕಾದಿದ್ದರು, ಆದರೆ  ಗೌಡರ ಸುದೀರ್ಘ ಭಾಷಣ ಕೇಳಿ ಬಿಜೆಪಿಯವರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೂ ಸುಸ್ತಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com