ಮೈತ್ರಿ ಸರ್ಕಾರ ಉಳಿಯಬಾರದು, ಉರುಳಬೇಕು: ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ

ಶಾಸನ ಸಭೆಯಲ್ಲಿ ಮಾತಾಡುವುದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲ ಹರಣ ಮಾಡಬಾರದು. ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ....
ಕೆಎನ್ ರಾಜಣ್ಣ
ಕೆಎನ್ ರಾಜಣ್ಣ
Updated on
ತುಮಕೂರು: ಶಾಸನ ಸಭೆಯಲ್ಲಿ ಮಾತಾಡುವುದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲ ಹರಣ ಮಾಡಬಾರದು. ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಆದ್ದರಿಂದ ಸರ್ಕಾರ ಉಳಿಬಾರದು, ಉರುಳಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಶನಿವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಅಂತಹದರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ. ಬಿಜೆಪಿಯವರಿಗೆ ಬೈದರೆ ಮಾತ್ರ ಮುಸ್ಲಿಮರು ಕಾಂಗ್ರೆಸ್ ಗೆ ವೋಟ್ ಹಾಕುತ್ತಾರೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಜಗಳ ಇದಾಗಿದ್ದರೂ ಬಿಜೆಪಿಗೆ ಬಯ್ಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರ ವಿಶ್ವಾಸಮತದಲ್ಲಿ ಜಯಗಳಿಸುವುದಿಲ್ಲ ಎಂದರು.
ಈ ಸರ್ಕಾರದಲ್ಲಿ ಕಾಂಗ್ರೆಸ್ ನ ಒಂದಿಬ್ಬರು ಶಾಸಕರು ಮಾತ್ರ ದೇವೇಗೌಡರ ಕುಟುಂಬಕ್ಕೆ ಬೇಕು. ಇನ್ನು ಕೆಲ ದೋಸ್ತಿ ಶಾಸಕರು ರಾಜೀನಾಮೆ ಸಲ್ಲಿಸಲಿದ್ದಾರೆ. ಹೆಸರು ಹೇಳಿದರೆ ಅವರು ಎಚ್ಚರಗೊಳ್ಳುತ್ತಾರೆ. ಆದ್ದರಿಂದ ಅವರ ಹೆಸರು ಪ್ರಸ್ತಾಪಿಸುವುದಿಲ್ಲ ಎಂದರು.
1989ರಲ್ಲಿ 20 ಜನ ಶಾಸಕರಿಗೆ ರಾಜೀನಾಮೆ ಕೊಡಿಸಿ, ದೇವೇಗೌಡರು ಎಸ್.ಆರ್. ಬೊಮ್ಮಾಯಿ ನೇತೃತ್ವದ ಸರ್ಕಾರ ಉರುಳಿಸಿದ್ದರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ ಎನ್ನುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗೆ ಕೆ. ಎನ್. ರಾಜಣ್ಣ ಕುಟುಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com