ನೂತನ ಸಭಾಧ್ಯಕ್ಷರಾಗಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ ಖಚಿತ

ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಬಿಜೆಪಿ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ....
ಸಭಾಧ್ಯಕ್ಷರಾಗಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ
ಸಭಾಧ್ಯಕ್ಷರಾಗಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ
Updated on
ಬೆಂಗಳೂರು: ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಬಿಜೆಪಿ ಹಿರಿಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.
ಸೋಮವಾರ ವಿಧಾನಸಭೆ ಕಲಾಪದ ಬಳಿಕ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜುಲೈ 31 ರಂದು ಬುಧವಾರ ಚುನಾವಣೆ ಘೋಷಣೆಯಾಗಿತ್ತು.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಬಹುಮತ ಇಲ್ಲದ ಕಾರಣ ಸ್ಪರ್ಧೆಯಿಂದ ಮೈತ್ರಿ ಪಕ್ಷಗಳು ಹಿಂದೆ ಸರಿದಿದ್ದು,  ಕಾಗೇರಿ ಅವಿರೋಧವಾಗಿ ಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಬುಧವಾರವಿಧಾನಸಭೆ ಸದನದಲ್ಲಿ ಸಭಾಧ್ಯಕ್ಷರ ಹೆಸರನ್ನು ಅಧಿಕೃತ ಘೋಷಣೆ ಮಾಡಲಾಗುವುದು.
ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಎಂ.ವಿಶಾಲಾಕ್ಷಿ ಅವರಿಗೆ  ಪಕ್ಷದ ಮುಖಂಡರ ಜೊತೆ ಕಾಗೇರಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
ವಿಶ್ವೇಶ್ವರ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾಗೇರಿಯಲ್ಲಿ 1961, ಜುಲೈ 10 ರಂದು ಜನಿಸಿದ್ದು, ಧಾರವಾಡದ ಕರ್ನಾಟಕ ವಿಶ್ವದ್ಯಾಲಯದಲ್ಲಿ ಬಿ.ಕಾಂ ಪದವಿ ಮುಗಿಸಿದ್ದಾರೆ. ಕಾಲೇಜು ದಿನಗಳಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿ ಹಾಗೂ ವಿದ್ಯಾರ್ಥಿ ಸಂಘದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು
.  
ಆರು ಬಾರಿ ಶಾಸಕರಾಗಿರುವ ಕಾಗೇರಿ ಪ್ರಸಕ್ತ ಶಿರಸಿ ವಿಧಾಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1994-99, 1999-2004 ಹಾಗೂ 2008-2008 ಮೂರು ಬಾರಿ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸದಾಗಿ ರಚಿಸಲಾದ ಶಿರಸಿ ಕ್ಷೇತ್ರಕ್ಕೆ ಅವರು ಸ್ಥಳಾಂತರಗೊಂಡರು. 2008, 2013 ಹಾಗೂ 2018 ರ ವಿಧಾನಸಭೆ ಚುನಾವಣೆಗಳಲ್ಲಿ ಶಿರಸಿಯಿಂದ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿಸ್ತಿನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರು ಎಲ್ಲರೂ ಸೇರಿ ನನ್ನನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ನಿಷ್ಠಾವಂತನಾಗಿ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಾಗೇರಿ ಪಕ್ಷದ ನಿಷ್ಠಾವಂತ ಸ್ವಯಂ ಸೇವಕ. ಇಂತಹ  ಸ್ವಯಂಸೇವಕ ಈಗ ಸಭಾಧ್ಯಕ್ಷರಂತಹ ಉನ್ನತ ಸ್ಥಾನಕ್ಕೆ ಏರಿದ್ದು, ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com