ಯಡಿಯೂರಪ್ಪ ಜೊತೆ ಯಾವುದೇ ಮನಸ್ತಾಪವಿಲ್ಲ, ಅನರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಕಟೀಲ್
ಬೆಂಗಳೂರು: ನನ್ನ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ಯಾವುದೇ ರೀತಿಯ ಮನಸ್ತಾಪಗಳಿಲ್ಲ. ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ವಾಪಸ್ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎಂಟು ದಿನಗಳಿಂದ ಮುಖ್ಯಮಂತ್ರಿ ಹಾಗೂ ನಾನು ಪ್ರವಾಸದಲ್ಲಿದ್ದೆವು. ಹೀಗಾಗಿ ಪರಸ್ಪರ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಅವಕಾಶ ಸಿಕ್ಕಿದ್ದು, ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದೇವೆ. ನೆರೆ ಪರಿಹಾರದ ಕುರಿತಂತೆಯೂ ಚರ್ಚಿಸಿದ್ದೇವೆಂದು ತಿಳಿಸಿದ್ದಾರೆ.
ಪಕ್ಷ ಸಂಘಠನೆ ಹಾಗೂ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಡಿಯೂರಪ್ಪ ಅವರೇ ನನಗೆ ಮಾರ್ಗದರ್ಶಕರು. ಪದಾಧಿಕಾರಿಗಳ ಬದಲಾವಣೆ ವಿಚಾರದಲ್ಲಿ ನನ್ನ ಹಾಗೂ ಯಡಿಯೂರಪ್ಪ ನಡುವೆ ಯಾವುದೇ ಮನಸ್ತಾಪವಿಲ್ಲ. ಪ್ರಧಾನ ಕಾರ್ಯದರ್ಶಯಾಗಿ ಸಿಟಿ ರವಿ ಇದ್ದರು. ನಮ್ಮ ಪಕ್ಷದ ನಿಯಮ ಒಬ್ಬರಿಗೆ ಒಂದೇ ಹುದ್ದೆ ಎಂಬುದಾಗಿದೆ. ಹೀಗಾಗಿ ಸಿಟಿ ರವಿ ಸಚಿವರಾದ ಬಳಿಕ ಅವರ ಜಾಗಕ್ಕೆ ಕಾರ್ಯದರ್ಶಿಯಾಗಿ ಮಹೇಶ್ ಅವರನ್ನು ನೇಮಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಅನರ್ಹ ಶಾಸಕರ ಕುರಿತು ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ, ಅನರ್ಹ ಶಾಸಕರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಈ ಕುರಿತು ಅಮಿತ್ ಶಾ ಹಾಗೂ ಯಡಿಯೂರಪ್ಪ ಜೊತೆ ಸೇರಿ ಚರ್ಚೆ ನಡೆಸಿ ಉಪ ಚುನಾವಣೆ ಟಿಕೆಟ್ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ