ಬೆಂಗಳೂರು: ನೆರೆ ಪರಿಹಾರ ವಿಳಂಬ ನೀತಿ ಕುರಿತಂತೆ ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದ ಹಿನ್ನಲೆಯಲ್ಲಿ ವಿಜಯಪುರ ನಗರ ಕ್ಷೇತ್ರದ ಶಾಸಕ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಶುಕ್ರವಾರ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಮೂಲಕ ಸ್ವಪಕ್ಷದಲ್ಲಿಯೇ ಕೇಳಿ ಬರುತ್ತಿದ್ದ ಭಿನ್ನ ಧ್ವನಿಗಳಿಗೆ ತೀಕ್ಷ್ಣ ಸಂದೇಶ ರವಾನಿಸಿರುವ ಬಿಜೆಪಿ ವರಿಷ್ಠರು, ಅಶಿಸ್ತ ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ನೇರವಾಗಿ ಎಚ್ಚರಿಸಿದ್ದಾರೆ.
ನಿಮ್ಮ ವಿರುದ್ಧ ಪಕ್ಷ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆಯನ್ನು 10 ದಿನಗಳೊಳಗೆ ನಮಗೆ ಸಲ್ಲಿಸಬೇಕೆಂದು ನೋಟಿಸ್ ನಲ್ಲಿ ಬಿಜೆಪಿ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.ಒಂದು ವೇಳೆ 10 ದಿನದೊಳಗೆ ವಿವರಣೆ ನೀಡದಿದ್ದರೆ, ನಿಮ್ಮ ವರ್ತನೆ ಬಗ್ಗೆ ನಿಮಗೆ ಯಾವುದೇ ವಿವರಣೆಗಳಿಲ್ಲ ಎಂದು ಭಾವಿಸಿ ಕೇಂದ್ರೀಯ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ನೋಟಿಸ್ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಮರುದಿನವೇ ವರಿಷ್ಠರಿಂದ ಯತ್ನಾಳ್ ಅವರಿಗೆ ನೋಟಿಸ್ ಜಾರಿಗೊಳಿಸಿರುವುದು ಯಡಿಯೂರಪ್ಪ ಪಾಳೆಯದಲ್ಲಿ ಬೇಸರ ಮತ್ತು ಆಕ್ರೋಶ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
Advertisement
Advertisement