ಯಡಿಯೂರಪ್ಪನಿಗೆ ಸರ್ಕಾರ ನಡೆಸುವ ತಾಕತ್ತು ಇದ್ದಂತಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ
ಹಾಸನ: ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಮತ್ತು ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ.ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಾಗ ಅವರು ದೆಹಲಿಗೆ ತೆರಳಿದ್ದರು.ಹಾಗಾಗಿ ಸಭೆಗೆ ಬಂದಿರಲಿಲ್ಲ ಅಷ್ಟೇ.ಇದರ ಬಗೆಗಿನ ಊಹೆ,ಗಾಳಿ ಸುದ್ದಿಗಳಿಗೆ ಯಾವುದೇ ಅರ್ಥವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.ಪಕ್ಷ ಕಟ್ಟುವ ವಿಚಾರದಲ್ಲಿ ಅವರಿಗೆ ಅವರದ್ದೇ ಆದ ಶಕ್ತಿ,ನಾಯಕತ್ವ ಇದ್ದೇ ಇರುತ್ತದೆ ಅದರ ಬಗ್ಗೆ ನಾನು ಮಾತಾಡಲ್ಲವೆಂದರು.ಹಿಂದೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಲು ಹೈಕಮಾಂಡ್ ಸೂಚನೆ ನೀಡಿತ್ತು.ಮುಂದೆಯೂ ಮೈತ್ರಿ ಬಗ್ಗೆ ಹೈಕಮಾಂಡ್ ನವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳುವ ಮೂಲಕ ಉಪ ಚುನಾವಣೆಗಳಲ್ಲಿ ಮೈತ್ರಿ ಬೇಕಾ ಬೇಡವಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
ಸರ್ಕಾರ ನಡೆಸಲು ಯಡಿಯೂರಪ್ಪನವರಿಗೆ ತಾಕತ್ತು ಇದ್ದ ಹಾಗೆ ಕಾಣಿಸುತ್ತಿಲ್ಲ.ಪ್ರವಾಹದಿಂದ ತತ್ತರಿಸಿದ ರಾಜ್ಯಕ್ಕೆ ಪರಿಹಾರ ತರಲು ಅವರಿಂದ ಸಾಧ್ಯವಾಗುತ್ತಿಲ್ಲ.ರಾಜ್ಯದ ಜನ ಬಿಜೆಪಿಯ 25 ಸಂಸದರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳಿಸಿದರೂ, ಯಾವುದೇ ಪ್ರಯೋಜನವಿಲ್ಲದಂತಾಗಿದೆ.ರಾಜ್ಯದಲ್ಲಿ ಪ್ರವಾಹದಿಂದ ಸಾವಿರಾರು ಕೋಟಿ ರೂ.ನಷ್ಟವಾದರೂ ಕೇಂದ್ರದಿಂದ ಇದುವರೆಗೆ ಒಂದು ರೂಪಾಯಿ ಪರಿಹಾರವೂ ಬಿಡುಗಡೆಯಾಗಿಲ್ಲ,ಏಳೆಂಟು ಲಕ್ಷ ಜನರು ಬೀದಿ ಪಾಲಾದರು,ಎರಡೂವರೆ ಲಕ್ಷ ಮನೆಗಳು ನೆಲಸಮವಾಗಿವೆ ಆದರೂ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಕನಿಕರವಿಲ್ಲ ಎಂದು ಆರೋಪಿಸಿದರು.