ಬೆಳಗಾವಿ: ಮೈತ್ರಿ ಸರ್ಕಾರದಲ್ಲಿ ಹಲವು ದಿನಗಳ ಬಂಡಾಯದ ನಂತರ ಸ್ವಕ್ಷೇತ್ರ ಗೋಕಾಕ್ ಗೆ ಆಗಮಿಸಿದ ಶಾಸಕ ರಮೇಶ್ ಜಾರಕಿಹೊಳಿ ಮೇ 25ರ ನಂತರ ನಮಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಮತ್ತು ಬಲ ಸಿಗಲಿದೆ. ಕಾದು ನೋಡಿ ಎಂದಿದ್ದಾರೆ.
ಗೋಕಾಕ್ ನಲ್ಲಿ ಕರ್ನಾಟಕ ಹಾಲು ಒಕ್ಕೂಟದ ನೂತನ ನಿರ್ದೇಶಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉನ್ನತ ಸ್ಥಾನದಲ್ಲಿರುವ ಇಂದಿನ ಎಲ್ಲಾ ಸಚಿವರುಗಳು ಸದ್ಯದಲ್ಲಿಯೇ ಮಾಜಿ ಸಚಿವರುಗಳಾಗಲಿದ್ದಾರೆ ಎಂದು ತಮ್ಮ ಸೋದರ ಮತ್ತು ಸಚಿವ ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸದೆ ಹೇಳಿದರು.
ಮೇ 25ರ ನಂತರ ರಾಜ್ಯ ರಾಜಕಾರಣದಲ್ಲಿ ಧ್ರುವೀಕರಣ ನಡೆಯಲಿದೆ. ಕೆಂಪು ದೀಪಗಳಿಂದ ಉರಿಯುವ ಕಾರಿನಲ್ಲಿ ಸುತ್ತಾಡುವ ಸಚಿವರುಗಳನ್ನು ನೋಡಿ ಯಾರೂ ಕೂಡ ಹೆದರಬೇಕಾಗಿಲ್ಲ. ಯಾವ ನಾಯಕರನ್ನೂ ನಂಬಬೇಡಿ, ಒಂದಲ್ಲ ಒಂದು ದಿನ ಅವರು ಬೆನ್ನಹಿಂದಿನಿಂದ ಬಂದು ಚೂರಿ ಹಾಕುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.