ಬೆಂಗಳೂರು: ನನ್ನ ಸಾವು ಬಯಸಿದವರ ಕ್ಷಮಿಸಿಬಿಡು ತಂದೆಯೇ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟಾಂಗ್ ನೀಡಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಶ್ರೀರಾಮುಲು ಅವರು ವೀರ ಸಾವರ್ಕರ್ ಹಾಗೂ ನಾಥೂರಾಮ್ ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅವರು ಭೂಮಿ ಮೇಲೆ ಇರಬಾರದು. ಸಿದ್ದರಾಮಯ್ಯ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ. ಸಾವರ್ಕರ್ ಬಗ್ಗೆ ಓದಿಕೊಂಡು ಮಾತನಾಡಲಿ ಎಂದು ಹೇಳಿದ್ದರು.
ಈ ಹೇಳಿಕೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟಾಂಗ್ ನೀಡಿರುವ ಸಿದ್ದರಾಮಯ್ಯ, ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು ಎಂದು ಶ್ರೀರಾಮುಲು ಹೇಳಿದ್ದಾರೆ. ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುತ್ತೇನೆ. ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆನ್ನುವುದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು ಸಾವರ್ಕರ್ ಅವರಿಗೆ ಭಾರತ ರತ್ನ ಆಮೇಲೆ ಕೊಡುವಿರಂತೆ ಮೊದಲು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನೇ ತೇದು ಲಿಂಗೈಕ್ಯರಾಗಿರುವ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ. ಕನಿಷ್ಠ ಈ ಒಂದು ಭರವಸೆಯನ್ನಾದರೂ ಈಡೇರಿಸಿ ಎಂದು ಟ್ವೀಟ್ ಮಾಡಿದ್ದರು.
Advertisement