ಬೆಂಗಳೂರು: ನನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಹಾಗೂ ಹೆಚ್ಚು ವೇದನೆ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋವು ತೋಡಿಕೊಂಡಿದ್ದಾರೆ.
ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾರಿ ಸೋಲು ಕಾಣುತ್ತೇನೆಂದುಕೊಂಡಿರಲಿಲ್ಲ. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾವು ಸೋಲಿಸಿದಂತೆ ಅವರು ನನ್ನನ್ನು ಸೋಲಿಸಿದ್ದಿದ್ದರೆ. ಈ ರಾಜ್ಯದ ಭವಿಷ್ಯ ಏನಾಗುತ್ತಿದ್ದು ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ತಮ್ಮನ್ನು ಸೋಲಿಸಲು ಕಾರಣಗಳೇನು ಎಂದು ಕ್ಷೇತ್ರದ ಜನರಿಗೆ ಪ್ರಶ್ನೆ ಮಾಡಿದ್ದಾರೆ.
ನನ್ನ ಸೋಲಿಗೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ನವರು ಕಾರಣ. ವಿರೋಧ ಪಕ್ಷಗಳ ಜೊತೆ ನಮ್ಮ ಪಕ್ಷದ ನಾಯಕರೂ ಕಾರಣ. ಅವರು ನನಗಲ್ಲ, ಪಕ್ಷಕ್ಕೆ ದ್ರೋಹ ಮಾಡಿದರು. ಈ ಬಗ್ಗೆ ಅವರೇ ಆತ್ಮವಲೋಕನ ಮಾಡಿಕೊಂಡು ಅವರೇ ಪಕ್ಷ ಬಿಟ್ಟುಬಿಡಬೇಕು. ಕ್ಷುಲಕ ಕಾರಣಕ್ಕಾಗಿ ಪಕ್ಷ ವಿರುದ್ದ ಕೆಲಸ ಮಾಡಬಾರದು.ನಾಯಕತ್ವ ಇಷ್ಟ ಇಲ್ಲ ಎಂದರೆ ಪಕ್ಷ ಬಿಟ್ಟು ಹೋಗಬೇಕು. ಪಕ್ಷಕ್ಕೆ ಇಲ್ಲಿ ಯಾರು ಅನಿವಾರ್ಯ ಅಲ್ಲ. ವ್ಯಕ್ತಿಗೆ ಪಕ್ಷ ಅನಿವಾರ್ಯ ಎಂಬುದನ್ನು ಮರೆಯಬಾರದು. ನಮ್ಮವರಲ್ಲೆ ಕೆಲವರಿಗೆ ನಾನು ಮತ್ತೆ ಸಿಎಂ ಆಗೋದು ಬೇಕಿರಲಿಲ್ಲ. ಹೀಗಾಗಿ ನನ್ನನ್ನ ಸೋಲುವಂತೆ ಮಾಡಿದರು ಎಂದು ಸ್ವಪಕ್ಷ ನಾಯಕರ ವಿರುದ್ಧವೇ ಸಿದ್ದರಾಮಯ್ಯ ಅವರು ಕಿಡಿಕಾರಿದರು.
2006ರ ಉಪ ಚುನಾವಣೆ ಗೆಲುವಿನ ಋಣ ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಬಾದಾಮಿಗೆ ಹೋಗಲಿಲ್ಲ. ಆದರೂ, ಅಲ್ಲಿನ ಜನ ನನ್ನನ್ನ ಗೆಲ್ಲಿಸಿದರು. ನೀವು ಸೋಲಿಸಿದ ಹಾಗೇ ಅವರು ಸೋಲಿಸಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಇಲ್ಲಿ ಗೆದಿದ್ದರೆ ಮತ್ತೆ ಸಿಎಂ ಆಗುವಂತಾಹ ಅವಕಾಶವು ಇತ್ತು.ಅದು ನನ್ನ ಕೊನೆ ಚುನಾವಣೆ ಅಂದುಕೊಂಡೆ ಸ್ಪರ್ಧಿಸಿದ್ದೆ.ಆದರೆ ಜನರು ನನ್ನನ್ನ ತಿರಸ್ಕಾರ ಮಾಡಿದರು. ಯಾಕಾಗಿ ತಿರಸ್ಕರಿಸಿದರು ಅಂತ ನೀವೇ ಒಮ್ಮೆ ಯೋಚನೆ ಮಾಡಿ ಎಂದು ನೋವು ತೋಡಿಕೊಂಡಿದ್ದಾರೆ.
ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಗ್ರಾಮ ಜನಾಧಿಕಾರ ಸಭೆಯಲ್ಲಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಇನ್ನೊಂದು ಬಾರಿ ಚೂರಿ ಹಾಕಿದರೆ ಏನು ಮಾಡುವುದು ಎಂದು ನೋವಿನಿಂದಲೇ ಪ್ರಶ್ನಿಸಿದರು.
Advertisement