ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಕೊರತೆ: ಭವಿಷ್ಯದಲ್ಲಿ ತಲೆದೋರಬಹುದೇ ರಾಜಕೀಯ ಅರಾಜಕತೆ?

ರಾಜ್ಯ ರಾಜಕೀಯದಲ್ಲಿ ನಾಯಕತ್ವದ ಕೊರತೆ ಕಾಣುತ್ತಿದೆ. ಭವಿಷ್ಯದಲ್ಲಿ ರಾಜಕೀಯ ಅರಾಜಕತೆ ತಲೆದೋರಬಹುದೇ ಎಂಬ ಪ್ರಶ್ನೆ ಕಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಾಜಿ  ಪ್ರಧಾನಿ ಇಂದಿರಾಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ಆದಂತಹ ಯೋಜನೆಗಳಾದ ಉಳುವವನೇ ಭೂಮಿಯ ಒಡೆಯ, ಋಣಮುಕ್ತ, ಜೀತ ಪದ್ಧತಿ ನಿರ್ಮೂಲನ ಮುಂತಾದ  ಯೋಜನೆಗಳನ್ನು ಜಾರಿಗೆ ತರುವ ಮೂಲಕ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣರ ಹಣ ಮತ್ತು  ಜಮೀನುಗಳು ದೂರ ಆದ ಕಾರಣ ಈ ಮೂಲಕ ಈ ಮತಗಳು ಕಾಂಗ್ರೆಸ್ನಿಂದ ದೂರವಾದವು

ಬಳಿಕ  ಸಂಸ್ಥಾ ಕಾಂಗ್ರೆಸ್ ನ ಮೂಲಕ ಈ ಮಾತುಗಳು ಜನತಾ ಪರಿವಾರಕ್ಕೆ ವರ್ಗಾವಣೆಯಾದವು. ಜನತಾ  ಪಕ್ಷ ಅನೇಕ ಗೊಂದಲಗಳಿಂದಾಗಿ ವಿಭಜನೆಗೊಂಡ ಮೇಲೆ ಒಕ್ಕಲಿಗರು ದೇವೇಗೌಡರನ್ನು ಜಾತಿಯ  ನಾಯಕನನ್ನಾಗಿ ನೋಡಲಾರಂಭಿಸಿದರು. ರಾಮಕೃಷ್ಣ ಹೆಗಡೆ, ಬೊಮ್ಮಾಯಿ, ಜೆ. ಎಚ್ ಪಟೇಲ್, ಎಂ.ಪಿ.  ಪ್ರಕಾಶ್ ಅವರ ನಂತರ ಬ್ರಾಹ್ಮಣ, ಲಿಂಗಾಯತ ಸಮಾಜ ಯಡಿಯೂರಪ್ಪ ಅವರನ್ನು ಅನುಕರಿಸಿತು

ಯಡಿಯೂರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎಂಬಂತಾಯಿತು. ಯಡಿಯೂರಪ್ಪ ಎಲ್ಲೇ ಹೋಗಲಿ ಕೆಲವರು ಅವರನ್ನು ಹಿಂಬಾಲಿಸಿದರು. ಇನ್ನು ಕೆಲವರು ಪಕ್ಷ ನೋಡಿ  ಅವರ ಹಿಂದೆ ಹೋದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾಯಕತ್ವದ ಕೊರತೆಯನ್ನು ಎಲ್ಲಾ ವರ್ಗಗಳಲ್ಲಿ  ಕಾಣಬಹುದಾಗಿದೆ. ದೇವೇಗೌಡರ ನಂತರ ಒಕ್ಕಲಿಗರ ನಾಯಕರು ಯಾರು? ಹಾಗೆಯೇ ಯಡಿಯೂರಪ್ಪ ನಂತರ  ಲಿಂಗಾಯತ ನಾಯಕ ಯಾರು? ಸಿದ್ದರಾಮಯ್ಯ ನಂತರ ಹಿಂದುಳಿದ ವರ್ಗಗಳ ನಾಯಕ ಯಾರು? ಎಂಬ ಪ್ರಶ್ನೆಗಳು  ಸಹಜವಾಗಿಯೇ ಉದ್ಭವವಾಗಿವೆ

ಎಚ್. ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಸಮೂಹ ನಾಯಕನಾಗಿ ಹೊರಹೊಮ್ಮಿಲ್ಲ. ಹಾಗೆಯೇ ಒಕ್ಕಲಿಗ ನಾಯಕನಾಗಿಯೂ  ಹೊರಹೊಮ್ಮಲಾಗಲಿಲ್ಲ. ದೇವೇಗೌಡರ ವಯಸ್ಸು ಮತ್ತು ಆರೋಗ್ಯ ಅವರಿಗೆ ತೊಡಕಾಗುತ್ತಿವೆ. ಇದರಿಂದ ಇರುವಂತಹ ಸನ್ನಿವೇಶದಲ್ಲಿ ಒಕ್ಕಲಿಗ ನಾಯಕತ್ವ ಬೆಳೆಸಿಕೊಳ್ಳುವ ಅವಕಾಶ ಇದೆ. ಬಹುಶಃ ಈ  ಅವಕಾಶವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಹಣ ಮತ್ತು ಕ್ರಿಯಾಶೀಲ ಕಾರಣಗಳಿಂದ  ಬೆಳೆಸಿಕೊಳ್ಳುವ ಅವಕಾಶಗಳು ಹೆಚ್ಚಿವೆ

ಹಾಗೆಯೇ ವೀರಶೈವ ಮತಗಳು ಯಡಿಯೂರಪ್ಪ ಅವರಿಗೆ  ವಯಸ್ಸಾದರೂ ಅಧಿಕಾರ ಮತ್ತು ಹಣದ ಕಾರಣದಿಂದ ಬಿಜೆಪಿಯಲ್ಲಿ ಇರುವಂತಾಗಿದೆ. ಇಂತಹ ಪ್ರಸಕ್ತ ಸನ್ನಿವೇಶದಲ್ಲಿ ಲಿಂಗಾಯತರ ಮತ ಬ್ಯಾಂಕನ್ನು ಬದಲಾಯಿಸುವ ಶಕ್ತಿ  ಉದಯೋನ್ಮುಖ ಲಿಂಗಾಯತ ಯುವ ನಾಯಕರಲ್ಲಿ ಕಾಣುತ್ತಿಲ್ಲ. ಇವರಲ್ಲಿ ಕಾಂಗ್ರೆಸ್ ನ ಎಂ.ಬಿ  ಪಾಟೀಲ್ ಸಹ ಒಬ್ಬರಾಗಿದ್ದಾರೆ. ಪಾಟೀಲ್ ಮಾಜಿ ಗೃಹ ಸಚಿವರಾಗಿದ್ದರೂ ವೀರಶೈವ ಸಮಾಜವನ್ನು  ತಮ್ಮತ್ತ ಸೆಳೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಕಾರಣಗಳು ಹಲವಾರು. ಇದಕ್ಕೆ  ಅವರು ವೀರಶೈವ ಲಿಂಗಾಯತ ಸಮಾಜದ ಸಣ್ಣ ಸಮುದಾಯ ಎಂದು ಪರಿಗಣಿಸಲ್ಪಡುವ ಕೂಡು ಒಕ್ಕಲಿಗ  ಸಮುದಾಯಕ್ಕೆ ಸೇರಿದವರು ಎಂಬ ಕಾರಣವಿರಬಹುದೇನೋ? ಹೀಗಾಗಿ ಬಹುಸಂಖ್ಯಾತ ವೀರಶೈವ ಲಿಂಗಾಯತ  ಸಮಾಜದ ನಾಯಕರು ಎಂ.ಬಿ. ಪಾಟೀಲ್ ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಳ್ಳಲು  ಹಿಂಜರಿಯುತ್ತಿದ್ದಾರೆ. ಇದಕ್ಕೂ  ಕಾರಣ ಅನೇಕ. 

ವಿಶೇಷವಾಗಿ ವೀರಶೈವ ಮತ್ತು  ಲಿಂಗಾಯತ ಎರಡನ್ನು ಪ್ರತ್ಯೇಕ ಎಂಬುದನ್ನು ಉರುಳಿಸಿದ್ದು. ಈ ಬಗ್ಗೆ ಪ್ರಸ್ತಾವನೆ  ಪ್ರಾರಂಭವಾಗಿದ್ದೇ ಎಂ.ಬಿ ಪಾಟೀಲ್ ಅವರಿಂದ ಎಂಬುದು ವೀರಶೈವ ಲಿಂಗಾಯತ ಮಠಾಧೀಶರ ನಾಯಕರ  ಅಭಿಪ್ರಾಯವಾಗಿದೆ. ಇದರೊಂದಿಗೆ ಅವರು ಉತ್ತಮ ಭಾಷಣಕಾರರು ಅಲ್ಲ, ತಾಳ್ಮೆಯ ವ್ಯಕ್ತಿತ್ವವೂ  ಅವರದ್ದಲ್ಲ,  ಹೀಗಾಗಿ ಆ ಸಮಾಜವು ಅವರೊಂದಿಗೆ ನಿಲ್ಲುತ್ತಿಲ್ಲ ಎಂಬುದು  ಒಂದು ವರ್ಗದ ಅಭಿಪ್ರಾಯವಾಗಿದೆ

ಇನ್ನು ಡಿ.ಕೆ.  ಶಿವಕುಮಾರ್ ಮೇಲೆ ಅನೇಕ ಪ್ರಕರಣಗಳು ಇದ್ದರೂ ಸಹ ಅವರ ಹಠವಾದಿ ಛಲ, ಜಾತಿವಾದಿ ಇತ್ಯಾದಿ  ವಿಶೇಷಣಗಳು ಅಲ್ಲಲ್ಲಿ ಕೇಳಿ ಬಂದರೂ ಶಿವಕುಮಾರ್ ಹಣ ಮತ್ತು ಹೋರಾಟದ ವಿಶೇಷಣಗಳಿಂದ ಒಕ್ಕಲಿಗರು ಅವರನ್ನು ಅನುಕರಿಸುವ ಅವಕಾಶಗಳು ಕಾಣುತ್ತಿವೆ.

ಅದೇ ರೀತಿ  ಕಾಂಗ್ರೆಸ್ ನ ಮೂಲ ಮತಗಳೆಂದು ಪರಿಗಣಿಸಲ್ಪಡುವ ಅಹಿಂದ ವರ್ಗದವರು ಶಿವಕುಮಾರ್ ಅವರನ್ನು ಒಪ್ಪಿಕೊಂಡಾಗ ಕರ್ನಾಟಕದ 9ರಿಂದ 10 ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ಶಕ್ತಿ ವೃದ್ಧಿಸಲು ಅವಕಾಶಗಳ  ಬಾಗಿಲು ತೆರೆಯಬಹುದು ಎಂದು ಅಂದಾಜಿಸಲಾಗಿದೆ. ಈ ಗೊಂದಲಗಳ ತೊಳಲಾಟದಲ್ಲಿ ಕಾಂಗ್ರೆಸ್ ನ  ಹೈಕಮಾಂಡ್ ಇದೆ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿರುವ  ಸಂದರ್ಭದಲ್ಲಿ ಈ  ಗೊಂದಲದಿಂದ ಕಾಂಗ್ರೆಸ್ ಹೈಕಮಾಂಡ್ ಹೊರಬರುವುದು ಹೇಗಿದೆಯೆಂದರೆ  ಮದುವೆಯಾಗದೆ ಹುಚ್ಚು ಬಿಡುವುದಿಲ್ಲ ಹುಚ್ಚು ಬಿಡದೆ ಮದುವೆ ಆಗುವುದಿಲ್ಲ ಎನ್ನುವಂತಹ  ಸಂದಿಗ್ಧತೆ ಎಸಿಸಿ ನಾಯಕರದ್ದು

ಬಿಜೆಪಿ ರಾಜ್ಯ ಮತ್ತು ಕೇಂದ್ರದ ಎರಡು ಕಡೆ ಸರ್ಕಾರದಲ್ಲಿದ್ದರೂ ಆರ್ಥಿಕ ನಿರ್ವಹಣೆಯಲ್ಲಿ ವಿಫಲಗೊಂಡಿರುವುದು, ಉದ್ಯೋಗ ಸೃಷ್ಟಿಯಲ್ಲಿ  ಕಳಪೆ ಸಾಧನೆ ತೋರುತ್ತಿರುವುದು ಹಾಗೂ ದೇಶದಲ್ಲಿ ಬಡತನ, ಬೆಲೆಯೇರಿಕೆ ಆರ್ಥಿಕ ಕುಸಿತ  ದಂತಹ ಅನೇಕ ಸಮಸ್ಯೆಗಳು ತಲೆದೋರಿದ್ದು, ಅಭಿವೃದ್ಧಿ ಮರೀಚಿಕೆ ಆಗುತ್ತಲೇ ಇದೆ. ಇಂತಹ  ಸಂದರ್ಭದಲ್ಲಿ ಕಾಂಗ್ರೆಸ್ ಪರಿಸ್ಥಿತಿಯನ್ನು ತನ್ನ ರಾಜಕೀಯ ಬಂಡವಾಳವನ್ನಾಗಿ  ಮಾಡಿಕೊಳ್ಳಬೇಕಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆಯಿಂದ  ಸೊರಗುತ್ತಿದೆ

ಬಿಜೆಪಿಯವರು ಮೂಲಭೂತ ಸಮಸ್ಯೆಗಳಾದ ಬಡತನ ನಿರುದ್ಯೋಗ ಸಮಸ್ಯೆ ಉದ್ಯೋಗ  ಸೃಷ್ಟಿಗಳ ಹಾಗೂ ಶಿಕ್ಷಣ ಅಭಿವೃದ್ಧಿ ಕಡೆ ಗಮನ ಹರಿಸದಿರುವುದು ಹಾಗೂ ಕೇವಲ ಭಾವನಾತ್ಮಕ ವಿಚಾರಗಳಾದ  ಸಿಎಎ, ಎನ್ಆರ್ ಸಿ, ಆರ್ಟಿಕಲ್ 35, 370, ತ್ರಿವಳಿ ತಲಾಕ್ ರಾಮಮಂದಿರ ಮುಂತಾದವುಗಳನ್ನು  ಬಂಡವಾಳವನ್ನಾಗಿ ಮಾಡಿಕೊಳ್ಳುತ್ತೊದ್ದಾರೆ. ಅದರ ಪರಿಣಾಮ ಜಿಡಿಪಿ 3.5ಕ್ಕೆ  ಕುಸಿದಿದೆ. ಹಸಿವಿನಿಂದ ನರಳುತ್ತಿರುವ ರಾಷ್ಟ್ರಗಳ ಪೈಕಿ ಭಾರತ  103ನೇ ಸ್ಥಾನಕ್ಕೆ ತಲುಪಿದೆ. ಇವುಗಳ ವಿರುದ್ಧ ಧ್ವನಿ ಎತ್ತಬೇಕಾದ ಕಾಂಗ್ರೆಸ್ ಕೇವಲ ಸಿಎಎ, ಎನ್ಆರ್ ಸಿ, ಎನ್ ಪಿಆರ್  ವಿರೋಧಿಸುವಲ್ಲಿಯೇ ಸಾಗುತ್ತಿದೆ

ಇನ್ನು   ದೇವೇಗೌಡರ ನಂತರ ಜೆಡಿಎಸ್ ಗೆ ಉತ್ತಮ ಭವಿಷ್ಯ ಇಲ್ಲ ಎನ್ನುವುದನ್ನು ಸತ್ಯ ಮಾಡಲು  ಸ್ವತಃ ಜೆಡಿಎಸ್ಸೇ ಹೊರಟಂತಿದೆ. ದೇವೇಗೌಡರ ಅನುಪಸ್ಥಿತಿಯಲ್ಲಿ ಜೆಡಿಎಸ್ ಗೆ ಕಾಯಕಲ್ಪ ನೀಡುವವರು  ಇಲ್ಲದಂತಾಗಿದ್ದಾರೆ. ಇಂತಹ ಪರಿಸ್ಥಿತಿ ರಾಜ್ಯ ರಾಜಕೀಯ ಅರಾಜಕತೆಗೆ  ಕಾರಣವಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ
(ವಿಶೇಷ ವರದಿ:ಸಂಧ್ಯಾ ಉರಣ್ ಕರ್ )

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com