ಡಿಜಿಟಲ್ ಕಾರ್ಯಕ್ರಮದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಲಿರುವ ಡಿಕೆಶಿ

ತಮಗೆ ಒಲಿದು ಬಂದ ಕೆಪಿಸಿಸಿ ಅಧ್ಯಕ್ಷಗಾದಿಯನ್ನು ಅದ್ಧೂರಿಯಾಗಿ ಅಲಂಕರಿಸಬೇಕೆಂಬ ಡಿಕೆ ಶಿವಕುಮಾರ್ ಅವರ ಕನಸಿಗೆ ಕೊರೋನಾ ವೈರಸ್ ಅಡ್ಡವಾಗಿ ನಿಂತಿದ್ದು, ಆದರೂ ಆದಾವುದಕ್ಕೂ ತಲೆಕೆಡಿಸಿಕೊಳ್ಳದ ಶಿವಕುಮಾರ್ ಅವರು...
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್
Updated on

ಬೆಂಗಳೂರು: ತಮಗೆ ಒಲಿದು ಬಂದ ಕೆಪಿಸಿಸಿ ಅಧ್ಯಕ್ಷಗಾದಿಯನ್ನು ಅದ್ಧೂರಿಯಾಗಿ ಅಲಂಕರಿಸಬೇಕೆಂಬ ಡಿಕೆ ಶಿವಕುಮಾರ್ ಅವರ ಕನಸಿಗೆ ಕೊರೋನಾ ವೈರಸ್ ಅಡ್ಡವಾಗಿ ನಿಂತಿದ್ದು, ಆದರೂ ಆದಾವುದಕ್ಕೂ ತಲೆಕೆಡಿಸಿಕೊಳ್ಳದ ಶಿವಕುಮಾರ್ ಅವರು ಇದೀಗ ಡಿಜಿಟಲ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲು ಮುಂದಾಗಿದ್ದು, ಈ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. 

ಪ್ರತೀ ಗ್ರಾಮಪಂಚಾಯತಿ ಹಾಗೂ ವಾರ್ಡ್ ಹಂತಗಳಲ್ಲಿ ರೂ.10,000ದಂತೆ ಒಟ್ಟು ರೂ.10 ಕೋಟಿ ವ್ಯಯಿಸಿ ಡಿಜಿಟಲ್ ಕಾರ್ಯಕ್ರಮವನ್ನು ಆಯೋಜನೆಗೊಳಿಸಲು ಡಿಕೆ.ಶಿವಕುಮಾರ್ ಅವರು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಪಾರ್ಟಿ ಫಂಡ್ ಬಳಕೆ ಬದಲು ಸ್ಥಳೀಯ ನಾಯಕರೇ ಹಣವನ್ನು ಸಂಗ್ರಹಿಸಿ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದ್ದು, ಡಿಜಿಟಲ್ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ರಾಜ್ಯದಾದ್ಯಂತ 281 ಪುರಸಭೆಗಳು , 37 ಜಿಲ್ಲಾ ವಿಭಾಗಗಳು, 6,021 ಗ್ರಾಮ ಪಂಚಾಯಿತಿಗಳು, 462 ಬ್ಲಾಕ್ ಗಳು ಹಾಗೂ 5,007 ವಾರ್ಡ್ ಗಳೊಂದಿಗೆ ಈಗಾಗಲೇ ಸಮನ್ವಯ ಸಾಧಿಸಲಾಗುತ್ತಿದೆ.
 
ಪದಗ್ರಹಣ ಸಂದರ್ಭದಲ್ಲಿ ರಾಜ್ಯ ಮೂಲೆ ಮೂಲೆಯಲ್ಲಿರುವ ಪಕ್ಷದ ಕಾರ್ಯಕರ್ತರು ನನ್ನೊಂದಿಗಿರಬೇಕೆಂದು ನಾನು ಬಯಸುತ್ತೇನೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಎಲ್ಇಡಿ ಸ್ಕ್ರೀನ್ ಸ್ಥಾಪಿಸಿ ಪ್ರತೀ ಪಂಚಾಯಿತಿಯಿಂದ ಸಂಪರ್ಕ ಸಾಧಿಸಲು ಡಿಜಿಟಲ್ ಬಗ್ಗೆ ಜ್ಞಾನವುಳ್ಳ ಯುವಕರನ್ನು ಗೂರ್ತಿಸಿ ಅವರಿಗೆ ತರಬೇತಿ ನೀಡಲು ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ. ಇಂಟರ್ನೆಟ್ ಸಮಸ್ಯೆಯಾಗುವ ಸ್ಥಳಗಳಲ್ಲಿ ಟಿವಿ ಸೆಟ್ ಗಳನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ಪ್ರತೀಯೊಬ್ಬರೂ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯ ಹೊರಾಂಗಣದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ದೊಡ್ಡ ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ಕೆಲವೇ ಕೆಲವು ವಾರ್ಡ್ ಗಳಲ್ಲಿ ಡಿಜಿಟಲ್ ಸ್ಕ್ರೀನ್ ಗಳನ್ನು ಹಾಕಿದರೂ ಕೂಡ ಅದರ ಖರ್ಚೂ ರೂ.9 ರಿಂದ 10 ಕೋಟಿ ವೆಚ್ಚವಾಗಲಿದೆ ಎಂದು ಕಾರ್ಯಕ್ರಮ ಆಯೋಜಕರೊಬ್ಬರು ಮಾಹಿತಿ ನೀಡಿದ್ದಾರೆ. 

ಡಿಕೆಶಿಯವರು ಮೊದಲು ಮೇ.31 ರಂದು ಕಾರ್ಯಕ್ರಮ ಆಯೋಜನೆಗೊಳಿಸಲು ನಿರ್ಧರಿಸಿದ್ದರು. ಆದರೆ, ರಾಜ್ಯ ಸರ್ಕಾರ ಪ್ರತೀ ಭಾನುವಾರ ಸಂಪೂರ್ಣ ಲಾಕ್'ಡೌನ್ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದಾದ ಬಳಿಕ ಮತ್ತೆ ಜೂನ್7 ರಂದು ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆದರೆ, ಜೂನ್.30ರವರೆಗೂ ಕೇಂದ್ರ ಸರ್ಕಾರ ಲಾಕ್ಡೌನ್ ವಿಸ್ತರಿಸಿತ್ತು, ಅಲ್ಲದೆ, ಎಲ್ಲಾ ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಇದೀಗ ಮತ್ತೆ ಕಾರ್ಯಕ್ರಮ ರದ್ದುಕೊಂಡಿದೆ. ಇದೀಗ ಕಾರ್ಯಕ್ರಮ ಯಾವಾಗ ಆಯೋಜನೆ ಮಾಡುತ್ತದೆ ಎಂಬುದರ ಬಗ್ಗೆ ಇನ್ನೂ ಯಾರ ಬಳಿಯೂ ಸ್ಪಷ್ಟ ಮಾಹಿತಿಗಳಿಲ್ಲ. ಆದರೂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧರಾಗುವಂತೆ ಆಗಾಗಲೇ ಆಯಾ ವಿಭಾಗದ ಅಧ್ಯಕ್ಷರಿಗೆ ಸೂಚನೆಗಳು ನೀಡಲಾಗಿದೆ. ಈ ನಡುವೆ ಪ್ರಾಯೋಗಿಕವಾಗಿ ಸ್ಥಳೀಯ ನಾಯಕರೊಂದಿಗೆ ಝೂಮ್ ಆ್ಯಪ್ ಮೂಲಕ ಕಾನ್ಫರೆನ್ಸ್ ವೊಂದನ್ನು ನಡೆಸಲಾಗುತ್ತಿದ್ದು, ಈ ಕಾನ್ಫರೆನ್ಸ್ ಜೂನ್ 7ರಂದು  ನಡೆಯಲಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com