ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೂ ಕೊಡದೆ ತಮ್ಮ ಬಳಿಯೇ ಇಟ್ಟುಕೊಂಡ ಸಿಎಂ ಯಡಿಯೂರಪ್ಪ

ಬೆಂಗಳೂರು ನಗರ ಪ್ರತಿನಿಧಿಸಲು ಈಗಾಗಲೇ ಸಂಪುಟದಲ್ಲಿ 7 ಸಚಿವರುಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ರಾಜಕೀಯ ಚುರುಕತನವನ್ನು ಪ್ರದರ್ಶಿಸಿದ್ದಾರೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಬೆಂಗಳೂರು ನಗರ ಪ್ರತಿನಿಧಿಸಲು ಈಗಾಗಲೇ ಸಂಪುಟದಲ್ಲಿ 7 ಸಚಿವರುಗಳಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತ್ರ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮ ಬಳಿಯೇ ಇಟ್ಟುಕೊಂಡು ರಾಜಕೀಯ ಚುರುಕತನವನ್ನು ಪ್ರದರ್ಶಿಸಿದ್ದಾರೆ. 

ಹಾಲಿ ಸಚಿವರ ಬಳಿಯಿದ್ದ ಹೆಚ್ಚುವರಿ ಖಾತೆಗಳನ್ನೇ ಹಂಚಿಕೆ ಮಾಡಿರುವ ಮುಖ್ಯಮಂತ್ರಿಗಳು ಯಾವುದೇ ಮೂಲ ಖಾತೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಿಲ್ಲ. ಬಜೆಟ್ ಪೂರ್ವಭಾನವಿ ಸಿದ್ಧತೆ ನಡೆಯುತ್ತಿರುವ ಈ ಹಂತದಲ್ಲಿ ಹಾಲಿ ಸಚಿವಲ ಮೂಲ ಖಾತೆಗಳನ್ನು ಬದಲಾಯಿಸಿದಲ್ಲಿ ಅದು ಬಜೆಟ್ ಮೇಲೆಯೇ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. 

ಜಲಸಂಪನ್ಮೂಲದ ನಂತರ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದ ಇಂಧನ ಖಾತೆಯನ್ನು ಮುಖ್ಯಮಂತ್ರಿಗಳು ಈ ಖಾತೆಗಾಗಿ ಮೂರ್ನಾಲ್ಕು ಸಚಿವರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಅಂತಿಮವಾಗಿ ಯಾರೊಬ್ಬರಿಗೂ ನೀಡುವುದು ಬೇಡ ಎಂಬ ನಿಲುವಿಗೆಬಂದ ಯಡಿಯೂರಪ್ಪ ಅವರು ಈಗಿರುವಂತೆಯೇ ತಾವೇ ಇಟ್ಟುಕೊಂಡಿದ್ದಾರೆ. 

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಆಸೆ ಇರಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಅವರಿಗೆ ಅವರು ಇದೂವರೆಗೆ ಕೆಲಸ ಮಾಡಿಕೊಂಡು ಬಂದಿರುವ ಸಹಕಾರ ಇಲಾಖೆಯನ್ನೇ ನೀಡಲಾಗಿದೆ. ಆ ಬಗ್ಗೆ ಅವರಿಗೆ ಬೇಸರವೇನೂ ಇಲ್ಲ. ಇನ್ನು ಭೈರತಿ ಬಸವರಾಜು ಅವರಿಗೆ ಬಯಸಿದಂತೆ ತನ ನಗರಾಭಿವೃದ್ಧಿ ಖಾತೆಯನ್ನೇ ನೀಡಲಾಗಿದೆ. ಕೆ.ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ ಜೊತೆಗೆ ಸಕ್ಕರೆ ಖಾತೆ ನೀಡಿರುವುದು ಅಚ್ಚರಿ ಮೂಡಿಸಿದೆ. ಶಿವರಾಂ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಕೊಡಲಾಗಿದೆ. ಆನಂದ್ ಸಿಂಗ್ ಅವರಿಗೆ ಆಹಾ ಮತ್ತು ನಾಗರೀಕ ಪೂರೈಕೆಯಂತಹ ಜವಾಬ್ದಾರಿಯುತ ಖಾತೆ ನೀಡಲಾಗಿದೆ. ರಮೇಶ್ ಜಾರಕಿಹೊಳಿಯವರ ಆಪ್ತರು ಎಂದು ಗುರ್ತಿಸಲ್ಪಟ್ಟಿರುವ ಶ್ರೀಮಂತ್ ಪಾಟೀಲ್ ಅವರಿಗೆ ಜವಳಿ ಖಾತೆ ಲಭಿಸಿದೆ. 

ಇನ್ನು ಮೂವರು ಉಪಮುಖ್ಯಮಂತ್ರಿಗಳ ಪೈಕಿ ಗೋವಿಂದ ಕಾರಜೋಳ ಅವರನ್ನು ಹೊರತುಪಡಿಸಿ ಲಕ್ಷ್ಮಣ ಸವದಿ ಹಾಗೂ ಡಾ.ಸಿಎನ್. ಅಶ್ವತ್ಥ ನಾರಾಯಣ ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಖಾತೆಗಳಲ್ಲಿ ಒಂದಿಷ್ಟು ಬದಲಾವಣೆಯಾಗಿದೆ. ಕಾರಜೋಳ ಅವರಿಗೆ ಲೋಕೋಪಯೋಗಿ ಜೊತೆಗೆ ಸಮಾಜ ಕಲ್ಯಾಣ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ, ಆ ಎರಡೂ ಖಾತೆಗಳನ್ನು ಸಂಪುಟ ವಿಸ್ತರಣೆ ನಂತರವೂ ಹಾಗೆಯೇ ಮುಂದುವರೆಸುವ ಮೂಲಕ ಅವರ ಆಡಳಿತ ವೈಖರಿ ಮತ್ತು ಹಿರಿತನಕ್ಕೆಮನ್ನಣೆ ಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಆದರೆ, ಮುಂದಿನ ಹಂತದ ಸಂಪುಟ ವಿಸ್ತರಣೆ ವೇಳೆ ಕಾರಜೋಳ ಅವರ ಬಳಿಯಿರುವ ಲೋಕೋಪಯೋಗಿ ಅಥವಾ ಸಮಾಜ ಕಲ್ಯಾಣ ಇಲಾಖೆಗಳ ಪೈಕಿ ಯಾವುದಾದರೊಂದು ಖಾತೆಯನ್ನು ಬೇರೆಯವರಿಗೆ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ. ಆದರೆ, ಲಕ್ಷ್ಮಣ ಸವದಿ ಅವರಿಗೆ ಸಾರಿಗೆ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗಿದ್ದ ಕೃಷಿ ಖಾತೆಯನ್ನು ಹಿಂಪಡೆದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಇದೀಗ ಅವರ ಬಳಿ ಕೇವಲ ಸಾರಿಗೆ ಇಲಾಖೆ ಮಾತ್ರ. ಇನ್ನು ಅಶ್ವಸ್ಥನಾರಾಯಣ ಅವರ ಬಳಿ ಹೆಚ್ಚುವರಿಯಾಗಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೂತನ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನೀಡಲಾಗಿದೆ. ಇದೀಗ ಅಶ್ವಸ್ಥ ನಾರಾಯಣ ಬಳಿ ಉನ್ನತ ಶಿಕ್ಷಣ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾ ಖಾತೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com