ನರಸಿಂಹರಾಜ ಕ್ಷೇತ್ರಕ್ಕೆ ನಾನೇ ಶಾಸಕ, ನಾನೇ ಸಚಿವ: ಎಸ್ ಟಿ ಸೋಮಶೇಖರ್

ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿಲ್ಲ ಎಂದು ಭಾವಿಸಬೇಡಿ. ಇಲ್ಲಿ ಉಸ್ತುವಾರಿ ಸಚಿವನಾಗಿಯೂ ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಇಲ್ಲಿನ ಶಾಸಕನಾಗಿಯೂ ಕೆಲಸ ಮಾಡುತ್ತೇನೆ. ನಿಮ್ಮ ಕೆಲಸವೇನೇ ಇದ್ದರೂ ತಮ್ಮ ಗಮನಕ್ಕೆ ತನ್ನಿ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್

ಮೈಸೂರು: ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿಲ್ಲ ಎಂದು ಭಾವಿಸಬೇಡಿ. ಇಲ್ಲಿ ಉಸ್ತುವಾರಿ ಸಚಿವನಾಗಿಯೂ ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಇಲ್ಲಿನ ಶಾಸಕನಾಗಿಯೂ ಕೆಲಸ ಮಾಡುತ್ತೇನೆ. ನಿಮ್ಮ ಕೆಲಸವೇನೇ ಇದ್ದರೂ ತಮ್ಮ ಗಮನಕ್ಕೆ ತನ್ನಿ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮಾರುತಿ ಸರ್ಕಲ್ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಾಧನೆಯ ಪತ್ರವನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. 
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಇಂದು ಅನೇಕ ಜನಪರ ಯೋಜನೆಗಳನ್ನು ತಂದಿದೆ. ಕೋವಿಡ್ 19 ಸಂದರ್ಭದಲ್ಲಿ ಅವರು ಕೈಗೊಂಡ ಯೋಜನೆಗಳು ಜನೋಪಯೋಗಿಯ‍ಾಗಿವೆ ಎಂದು ಸಚಿವರು ಹೇಳಿದರು.

ಸಂಸದರಾಗಿ ಆಯ್ಕೆಯಾದ ಕೆಲವರು 5 ವರ್ಷಗಳ ಬಳಿಕವೇ ಪುನಃ ಕಾಣಿಸಿಕೊಳ್ಳುತ್ತಾರೆ. ಆದರೆ, ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರು, ಪ್ರತಿ ಕಾರ್ಯಕ್ರಮದಲ್ಲೂ ಭಾಗವಹಿಸುತ್ತ ಕ್ಷೇತ್ರದ ಜನರ ಬಳಿಯೇ ಇರುತ್ತಾರೆ. ಕೇಂದ್ರದಿಂದ ಬರುವ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯೂ ಆಗಿದ್ದಾರೆ ಎಂದು ತಿಳಿಸಿದರು.

ಶಾಸಕ ರಾಮದಾಸ್ ಅವರು ಅವರ ಕ್ಷೇತ್ರದ 80 ಸಾವಿರ ಮನೆಗಳಿಗೆ ಚವನ್ ಪ್ರಾಶ್ ವಿತರಣೆ ಮಾಡಿದರು. ಅದು ಎಲ್ಲರಿಗೂ ಅನುಕರಣೀಯ. ಜೊತೆಗೆ ನನಗೂ ಒಂದು ಬಾಟಲಿಯನ್ನು ತಂದು ಕೊಟ್ಟರು. ಅದನ್ನು ಸೇವಿಸಿದ ನಾನು ಈಗ ನನ್ನ ಯಶವಂತಪುರ ಕ್ಷೇತ್ರದಲ್ಲೂ ಕೋವಿಡ್ 19 ಬಾಧಿತರಿಗೆ ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
 
ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಸಚಿವ ಸೋಮಶೇಖರ್ ಅವರಿಂದ ಕಲಿಯುವುದು ಬಹಳಷ್ಟು ಇದೆ. ಪ್ರತಿಯೊಬ್ಬರಿಗೂ ಅವಕಾಶವನ್ನು ಕೊಡುವ ದೊಡ್ಡಗುಣ ಅವರಲ್ಲಿದೆ. ತಮಗಿಂತ ಮುಂಚಿತವಾಗಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಬಂದ ಅತಿಥಿಗಳಿಗೆ ಅವಕಾಶವನ್ನು ಕೊಡುತ್ತಾರೆ. ಮೈಸೂರು ಭೇಟಿ ಸೇರಿದಂತೆ ಹಲವು ಕಡೆ ಅವರ ಪ್ರತಿ ನಡೆಯನ್ನು ನಾನು ಗಮನಿಸಿದಾಗ ಈ ವಿಷಯವನ್ನು ಅರಿತೆ. ಅವರ ಈ ಗುಣಗಳನ್ನು ನಾನೂ ಬೆಳೆಸಿಕೊಳ್ಳುವೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಆತ್ಮನಿರ್ಭರ ಯೋಜನೆ ಸಂಕಲ್ಪಕ್ಕೆ ನಾನೂ ಕೊಡುಗೆ ನೀಡುತ್ತೇನೆ. ಯಥೇಚ್ಛವಾಗಿ ಸ್ವದೇಶಿ ಉತ್ಪನ್ನವನ್ನು ಖರೀದಿಸುತ್ತೇನೆ, ಕೋವಿಡ್ -19 ಸೋಂಕಿನ ವಿರುದ್ಧ ಹೋರಾಡುತ್ತೇನೆ ಎಂಬಿತ್ಯಾದಿ ಸಂಕಲ್ಪ ಮಾಡಿದ ಜನಪ್ರತಿನಿಧಿಗಳು ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಬಳಿಕ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮೀಪದ ಮನೆ, ಅಂಗಡಿಗಳಿಗೆ ತೆರಳಿ ಕೇಂದ್ರದ ಸಾಧನೆಯ ಕರಪತ್ರಗಳನ್ನು ವಿತರಣೆ ಮಾಡಲಾಯಿತು.

ಶಾಸಕರಾದ ಎಸ್ ಎ ರಾಮದಾಸ್, ಎನ್. ನಾಗೇಂದ್ರ, ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ಹಾಗೂ ಮೈಸೂರು ಗ್ರಾಮೀಣ ಜಿಲ್ಲಾಧ್ಯಕ್ಷ ಎಸ್ ಡಿ ಮಹೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಿಪಿ ಮಂಜುನಾಥ್ ಇತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com