ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಬುಧವಾರ ರಾತ್ರಿ ಬಿಡುಗಡೆಯಾಗಿದ್ದು, ಕಳೆದ ವರ್ಷ ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾದ ಮೂವರು ಶಾಸಕರ ಪೈಕಿ ಇಬ್ಬರಿಗೆ ಟಿಕೆಟ್ ನೀಡಲಾಗಿದ್ದು, ಎಚ್ ವಿಶ್ವನಾಥ್ ಅವರ ಎಂಎಲ್ ಸಿ ಕನಸು ಭಗ್ನಗೊಂಡಿದೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ವಿಧಾನ ಪರಿಷತ್ ಚುನಾವಣೆಗೆ ಹತ್ತು ಸಂಭಾವ್ಯರ ಹೆಸರನ್ನು ಸೋಮವಾರ ರಾತ್ರಿಯೇ ಕಳುಹಿಸಿತ್ತು. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಇಂದು ರಾತ್ರಿ ಪಟ್ಟಿ ಬಿಡುಗಡೆ ಮಾಡಿದ್ದು, ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ಎಂಟಿಬಿ ನಾಗರಾಜ್, ಕ್ಷೇತ್ರ ಬಿಟ್ಟುಕೊಟ್ಟಿದ್ದ ಆರ್ ಶಂಕರ್ ಹಾಗೂ ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.
ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕಡೆಯ ದಿನವಾಗಿದೆ. ಹೀಗಾಗಿ ಇಂದು ತಡರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಚಿಂಚೋಳಿ ಉಪ ಚುನಾವಣೆ ವೇಳೆ ಅವಿನಾಶ್ ಜಾಧವ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಈಗ ಮಾತು ಉಳಿಸಿಕೊಳ್ಳುವಂತೆ ಬಿಎಸ್ ವೈ ಯಶಸ್ವಿಯಾಗಿದ್ದಾರೆ.
ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಮಾಜಿ ಶಾಸಕ ಸುನಿಲ್ ವಲ್ಯಾಪುರೆ ಅವರಿಗೆ ಸರ್ಕಾರ ರಚನೆಗೆ ಕಾರಣರಾಗಿದ್ದ ಕೋಟಾದಲ್ಲಿ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರಿಗೆ ಪಕ್ಷದ ಕಾರ್ಯಕರ್ತ ಕೋಟಾದಡಿ ಟಿಕೆಟ್ ಕೊಡಲಾಗಿದೆ.
Advertisement