ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ

ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಗೆ ಚರ್ಚೆ ನಡೆಸಲು ಸಾಕಷ್ಟು ಸಮಯ ನೀಡಲಾಗುತ್ತದೆ: ಜೆ.ಸಿ.ಮಾಧುಸ್ವಾಮಿ

ಸುಮಾರು 6 ತಿಂಗಳ ಅಂತರದ ಬಳಿಕ ರಾಜ್ಯ ಸರ್ಕಾರವು ಸೋಮವಾರದಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನವನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧ, ಕರ್ನಾಟಕ ಪೊಲೀಸ್ ಕಾಯ್ದೆ 1963ಗೆ ತಿದ್ದುಪಡಿ ಸೇರಿದಂತೆ ಒಟ್ಟು 18 ಮಸೂದೆಗಳ ಮಂಡಿಸಲು ಸರ್ಕಾರ ಯೋಜಿಸಿದೆ.
Published on

ಬೆಂಗಳೂರು: ಸುಮಾರು 6 ತಿಂಗಳ ಅಂತರದ ಬಳಿಕ ರಾಜ್ಯ ಸರ್ಕಾರವು ಸೋಮವಾರದಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನವನ್ನು ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಆನ್‌ಲೈನ್ ಜೂಜಾಟವನ್ನು ನಿಷೇಧ, ಕರ್ನಾಟಕ ಪೊಲೀಸ್ ಕಾಯ್ದೆ 1963ಗೆ ತಿದ್ದುಪಡಿ ಸೇರಿದಂತೆ ಒಟ್ಟು 18 ಮಸೂದೆಗಳ ಮಂಡಿಸಲು ಸರ್ಕಾರ ಯೋಜಿಸಿದೆ. 

ಈ ನಡುವೆ ವಿರೋಧ ಪಕ್ಷಗಳೂ ಕೂಡ ಹಲವಾರು ವಿಚಾರಗಳನ್ನು ಹಿಡಿದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲು ತಂತ್ರ ರೂಪಿಸುತ್ತಿವೆ. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್ ನಡೆಸಿದ ಸಂದರ್ಶನದಲ್ಲಿ ಅಧಿವೇಶನ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿದ್ದಾರೆ. 

ಅಧಿವೇಶನದ ವೇಳೆ ಸದನದಲ್ಲಿ ಪ್ರತಿಪಕ್ಷಗಳ ನಾಯಕರು ಮಾತನಾಡಲು ಸಾಕಷ್ಟು ಸಮಯವನ್ನು ನೀಡುತ್ತೇವೆ. ಆದರೆ, ಅವರು ಸದನದಿಂದ ಹೊರಹೋಗದೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಷ್ಟೇ ಎಂದು ಹೇಳಿದ್ದಾರೆ. 

6 ತಿಂಗಳ ಅಂತರದ ಬಳಿಕ ವಿಧಾನಸಭೆ ಅಧಿವೇಶನ ನಡೆಯುತ್ತಿದೆ, ನಿಮ್ಮ ಸಿದ್ಧತೆಗಳು ಹೇಗಿದೆ? 
ಅಧಿವೇಶನದ ವೇಳೆ ಕೆಲವು ಕಾಯ್ದೆಗಳ ತಿದ್ದುಪಡಿಗಳನ್ನು ಒಳಗೊಂಡಂತೆ 18 ಮಸೂದೆಗಳನ್ನು ಮಂಡಿಸುತ್ತಿದ್ದೇವೆ. ಪ್ರತಿದಿನ ಎರಡರಿಂದ ಮೂರು ಮಸೂದೆಗಳನ್ನು ಮಂಡಿಸಲಾಗುತ್ತದೆ. 6 ತಿಂಗಳ ಅಂತರದ ಬಳಿಕ ಅಧಿವೇಶನ ನಡೆಸುತ್ತಿರುವುದರಿಂದ ಮಸೂದೆಗಳ ಅಂಗೀಕಾರ ಬಾಕಿ ಉಳಿದುಕೊಂಡಿದೆ. 

10 ದಿನಗಳಲ್ಲಿ 18 ಮಸೂದೆಗಳು ಮಂಡನೆಯಾಗುತ್ತಿರುವುದರಿಂದ, ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸುವ ಮೊದಲು ಚರ್ಚಿಸಲು ಪ್ರತಿಪಕ್ಷಗಳಿಗೆ ಸಮಯ ನೀಡಲಾಗುತ್ತದೆ? 
ಇಲ್ಲಿ ಮುಚ್ಚಿಡಲು ಏನೂ ಇಲ್ಲ. ಪ್ರತಿ ಮಸೂದೆಗಳ ಕುರಿತು ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ ಸಾಕಷ್ಟು ಸಮಯವನ್ನು ನೀಡಲಾಗುತ್ತದೆ. ಮಸೂದೆಯನ್ನು ಅಂಗೀಕರಿಸುವ ಮೊದಲು ಚರ್ಚಿಸುವುದು ಪ್ರಜಾಪ್ರಭುತ್ವದ ಭಾಗವಾಗಿದೆ. ನಾವು ಅವರಿಗೆ ಸಮಯ ನೀಡಲು ಸಿದ್ಧರಿದ್ದೇವೆ, ಆದರೆ, ಅವರು ಸದನದಿಂದ ಹೊರಹೋಗದೆ ಚರ್ಚೆಯಲ್ಲಿ ಭಾಗವಹಿಸಬೇಕಿದೆ. ಉದ್ದೇಶಪೂರ್ವಕವಾಗಿ ಹೊರನಡೆದರೆ ಅಥವಾ ಕಲಾಪಕ್ಕೆ ಅಡ್ಡಿಪಡಿಸಿದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಲ್ಲಾ ಶಾಸಕರು ಮತ್ತು ಸಚಿವರಿಗೆ ಸದನದಲ್ಲಿ ಗೈರು ಹಾಜರಾಗದಂತೆ ಪತ್ರ ಬರೆದಿದ್ದಾರೆ. ನೀವು ಅದನ್ನು ಹೇಗೆ ಕಾರ್ಯಗತಗೊಳಿಸುತ್ತಿದ್ದೀರಿ?
ವಿಧಾನಮಂಡಲದ ಉಭಯ ಸದನಗಳ ಮುಖ್ಯ ಸಚೇತಕರ (ವಿಪ್ ಚೀಫ್) ಮೂಲಕ ಸೂಚನೆ ನೀಡಲಾಗುತ್ತದೆ. ಆದರೆ, ಈ ಬಾರಿ ನಮ್ಮ ಬಳಿ ಮುಖ್ಯ ಸಚೇತಕರಿಲ್ಲ. ಹೀಗಾಗಿ ನನ್ನ ಬಳಿಯಿರುವ ಅಧಿಕಾರವನ್ನು ಬಳಸಿ ನಾಯಕರು ಗೈರುಹಾಜರಾಗದೆ ಸದನಕ್ಕೆ ಬರುವಂತೆ ಸೂಚಿಸಲಾಗುತ್ತದೆ. ನಾಯಕರು ಒಪ್ಪುವ ವಿಶ್ವಾಸವೂ ನನಗಿದೆ. ಸೆಪ್ಟೆಂಬರ್ 13 ರಂದು ಶಾಸಕಾಂಗ ಸಭೆಯನ್ನು ನಡೆಸಲಾಗುತ್ತದೆ 

ಆರು ತಿಂಗಳ ಅಂತರದ ನಂತರ ನಡೆಯುತ್ತಿರುವ ಅಧಿವೇಶನವನ್ನು ನಡೆಸಲು 10 ದಿನಗಳು ಸಾಕೆಂದು ನಿಮಗನಿಸುತ್ತಿದೆಯೇ? 
ಬಜೆಟ್ ಅಧಿವೇಶನದಂತಲ್ಲದೆ, ಈ ಅಧಿವೇಶನವು ದೀರ್ಘವಾಗಿರಬೇಕಾಗಿಲ್ಲ. ನಮಗೆ ಐದು ದಿನಗಳು ಬೇಕಾಗುತ್ತದೆ. ಆದರೆ ನಾವು ಹತ್ತು ದಿನಗಳವರೆಗೆ ನಡೆಸುತ್ತಿದ್ದೇವೆ. ಹೆಚ್ಚಿನ ಸಮಯ ಅಗತ್ಯವಾದಲ್ಲಿ ಅದನ್ನು ವ್ಯವಹಾರ ಸಲಹಾ ಸಮಿತಿಯ ಮುಂದೆ ಇಡುತ್ತೇವೆ.

ತೈಲ ಬೆಲೆ ಏರಿಕೆ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಇನ್ನೂ ಹಲವು ವಿಚಾರಗಳನ್ನು ಹಿಡಿದು ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷದ ನಾಯಕರು ಸಿದ್ಧತೆ ನಡೆಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರದ ಬಳಿಯಿರುವ ತಂತ್ರವೇನು? 
ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. 

ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ, ಈ ಹಿನ್ನೆಲೆಯಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ?
ಅಧಿವೇಶನಕ್ಕೆ ಬರುವ ಎಲ್ಲಾ ಶಾಸಕರು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆರ್'ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯ ಮಾಡಲ್ಗಿದೆ. ಜೊತೆಗೆ ಸದನಕ್ಕೆ ಪ್ರವೇಶಿಸುವುದಕ್ಕೂ ಮುನ್ನ ಲಸಿಕೆ ಪ್ರಮಾಣಪತ್ರ ತೋರಿದುವುದನ್ನೂ ಕಡ್ಡಾಯ ಮಾಡಿದ್ದೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com