ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಭದ್ರನೆಲೆ ಕಂಡುಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರ ಛಲಬಲವೇ ಪ್ರಮುಖ ಕಾರಣ ಎಂಬುದು ಅವರ ರಾಜಕೀಯ ವೈರಿಗಳೂ ಗೊತ್ತು. ಹೀಗಿರುವಾಗ ಇತ್ತ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿರುವಾಗ ಅತ್ತ ಮಾಜಿ ಮುಖ್ಯಮಂತ್ರಿ ದುಬೈ ಪ್ರವಾಸದಲ್ಲಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೌದು. ದುಬೈ ಪ್ರವಾಸಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳಿ ವೀಕ್ಷಣೆ ಮಾಡುತ್ತಿದ್ದಾರೆ. ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮತ್ತು ಮೊಮ್ಮಕ್ಕಳ ಜೊತೆಗೆ ಬಿಎಸ್ ಯಡಿಯೂರಪ್ಪ ಪ್ರವಾಸ ಕೈಗೊಂಡಿದ್ದಾರೆ.
ಮಂಗಳವಾರ ದುಬೈ ಎಕ್ಸ್ ಪೋ -2020ಗೆ ಭೇಟಿ ನೀಡಿರುವ ಯಡಿಯೂರಪ್ಪ, ಭಾರತದ ಪೆವಿಲಿಯನ್ ಅತ್ಯದ್ಬುತವಾಗಿದೆ. ಮುಕ್ತ ವಾತಾವರಣ, ಅವಕಾಶಗಳು ಮತ್ತು ಬೆಳವಣಿಗೆ ಎನ್ನುವ ಆಶಯ ಅತ್ಯಂತ ಸಮರ್ಥವಾಗಿ ಪ್ರತಿಬಿಂಬಿತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಯಡಿಯೂರಪ್ಪ, ದುಬೈನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಆದರೆ, ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿರುವ ವೇಳೆಯಲ್ಲಿ ಯಡಿಯೂರಪ್ಪ ಅವರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ತೀವ್ರ ಕುತೂಹಲ ಕೆರಳಿಸಿದೆ.
Advertisement