ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ನಾಯಕತ್ವದ ಬದಲಾವಣೆ ವದಂತಿ ವ್ಯಾಪಕವಾಗಿರುವ ನಡುವೆ ಸಿಎಂ ಯಡಿಯೂರಪ್ಪ ಜು.25 ರಂದು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷ ಪೂರ್ಣಗೊಳ್ಳುವ ಸಂಭ್ರಮಕ್ಕಾಗಿ ಶಾಸಕರಿಗೆ ಆಯೋಜಿಸಲಾಗಿದ್ದ ಔತಣಕೂಟ ಮುಂದೂಡಲ್ಪಟ್ಟಿದೆ.
ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಹೊಸ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಮೂಲಗಳು ತಿಳಿಸಿವೆ. ಔತಣ ಕೂಟ ಮುಂದೂಡಲಾಗಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿಲ್ಲ.
ನಗರದ ಹೊಟೆಲ್ ನಲ್ಲಿ ಭಾನುವಾರ ಸಂಜೆ 7ಕ್ಕೆ ಔತಣ ಕೂಟ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಜುಲೈ 26 ರಂದು ಶಾಸಕಾಂಗ ಸಭೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೇ ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸ್ಪಷ್ಟತೆ ಸಿಗಲಿದೆ ಎಂದೂ ವಿಶ್ಲೇಷಿಸಲಾಗಿತ್ತು.
ಆದರೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಶಾಸಕಾಂಗ ಸಭೆಯನ್ನು ಕರೆದಿಲ್ಲ ಎಂದು ಹೇಳಿದ್ದಾರೆ. ಜು.26 ಕ್ಕೆ ಅಧಿಕಾರಾವಧಿಯಲ್ಲಿ ಎರಡು ವರ್ಷಗಳನ್ನು ಪೂರೈಸಿರುವ ಯಡಿಯೂರಪ್ಪ, ಕಳೆದ ವಾರ ದೆಹಲಿಗೆ ಭೇಟಿ ನೀಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.
ಈ ಭೇಟಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರದ ನಾಯಕ್ವ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಹೈಕಮಾಂಡ್ ಕೆಲಸ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ದೆಹಲಿಯಿಂದ ವಾಪಸ್ಸಾಗಿದ್ದ ಯಡಿಯೂರಪ್ಪ ರಾಜೀನಾಮೆ, ನಾಯಕತ್ವದ ಬದಲಾವಣೆಗಳ ವದಂತಿಗಳನ್ನು ಅಲ್ಲಗಳೆದಿದ್ದರು.
Advertisement