ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ರೂ.10,000 ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಶಾಸಕ ದಿನೇಶ್ ಗುಂಡೂರಾವ್ ಅವರು, ದೇಶವೇ ಕೋವಿಡ್ ಎರಡನೇ ಅಲೆಯ ಬೇಗುದಿಯಲ್ಲಿದೆ. ಲಾಕ್ಡೌನ್ನಿಂದಾಗಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ನೆಲಕಚ್ಚಿದೆ. ಲಾಕ್ಡೌನ್ ಪರಿಣಾಮ ಲಕ್ಷಾಂತರ ಜನರಿಗೆ ಉದ್ಯೋಗ ನಷ್ಟವಾಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರಗಳು ಬೆಲೆಯೇರಿಸಿ ಜನರ ಹಸಿ ಗಾಯದ ಮೇಲೆ ಬರೆ ಎಳೆದಿವೆ ಎಂದು ಕಿಡಿಕಾರಿದ್ದಾರೆ.
ಬೆಲೆ ಏರಿಕೆಯಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ರೂ.10,000 ಪರಿಹಾರ ನೀಡಬೇಕು. ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಬೇಕು. ಜೊತೆಗೆ ಈ ಕೂಡಲೆ ವಿದ್ಯುತ್ ದರ ಇಳಿಸಿ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ತೈಲಬೆಲೆ ಏರಿಕೆಯ ನೇರ ಪರಿಣಾಮ ಅಗತ್ಯ ವಸ್ತುಗಳ ಮೇಲೆ ಬಿದ್ದಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗಿದೆ. ವರ್ಷದ ಹಿಂದೆ ಸಾಮಾನ್ಯ ಕುಟುಂಬ ಮಾಸಿಕ 4 ಸಾವಿರದಲ್ಲಿ ಮನೆ ಖರ್ಚು ನಿಭಾಯಿಸುತಿತ್ತು. ಈಗ ಅದೇ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ಬೇಕು.
80 ರೂಪಾಯಿ ಇದ್ದ ತೊಗರಿಬೇಳೆಗೆ ಇಂದು 160 ರೂಪಾಯಿ. ಅಡುಗೆ ಎಣ್ಣೆಯ ಬೆಲೆ 90 ರಿಂದ 200 ರೂಪಾಯಿಗೆ ಏರಿಕೆಯಾಗಿದೆ. ಈ ಮಧ್ಯೆ 2013-14 ರಲ್ಲಿ 400 ರೂಪಾಯಿ ಇದ್ದ ಒಂದು ಗ್ಯಾಸ್ ಸಿಲಿಂಡೆರ್ನ ಬೆಲೆ 850 ಕ್ಕೆ ತಲುಪಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಪ್ರತಿ ಯೂನಿಟ್ ವಿದ್ಯತ್ಗೆ 30 ಪೈಸೆ ಏರಿಸಿದೆ. ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಸುವ ಸರ್ಕಾರದ ನಿರ್ಧಾರ ಸಂವೇದನಾರಹಿತಾ ನಡೆ. ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರ ಜೊತೆ ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ನೀಡಲಿದೆ. ಈಗಾಗಲೇ ಕೈಗಾರಿಕೆಗಳು ಲಾಕ್ಡೌನ್ನಿಂದಾಗಿ ಉತ್ಪಾದನೆ ನಿಲ್ಲಿಸಿವೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬಾಗಿಲು ಮುಚ್ಚಿದರೆ ಆಗುವ ಉದ್ಯೋಗ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
Advertisement