ಬೆಂಗಳೂರು: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.
ಅರುಣ್ ಸಿಂಗ್ ರಾಜ್ಯ ಭೇಟಿಯ ಒಂದು ದಿನ ಮೊದಲು ಸಿಎಂ ಬಿಎಸ್ ಯಡಿಯೂರಪ್ಪ ನೀಡಿರುವ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ರಾಜ್ಯಕ್ಕೆ ಜೂನ್ 16 ರಂದು ಬರುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಹೀಗಿದ್ದರೂ ಯಾರೂ ಬೇಕಾದರೂ ಅರುಣ್ ಸಿಂಗ್ ರನ್ನು ಭೇಟಿ ಮಾಡಿ ಅಭಿಪ್ರಾಯ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಅರುಣ್ ಸಿಂಗ್ ಜತೆ ಮತ್ತೊಬ್ಬ ವೀಕ್ಷಕರನ್ನು ಕಳಿಸುವಂತೆ ಭಿನ್ನರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನಗತ್ಯ ಪ್ರಶ್ನೆ ಕೇಳಬೇಡಿ, ಅರುಣ್ ಸಿಂಗ್ ರಾಜ್ಯದ ಉಸ್ತುವಾರಿ, ಇಲ್ಲಿಗೆ ಬಂದು ಎಲ್ಲರ ಜತೆ ಚರ್ಚೆ ಮಾಡ್ತಾರೆ ಅವರನ್ನು ಯಾರು ಬೇಕಾದ್ರೂ ಅವರನ್ನು ಭೇಟಿ ಮಾಡಬಹುದು. ಸುದೀರ್ಘವಾಗಿ ಎಲ್ಲರ ಜತೆ ಅರುಣ್ ಸಿಂಗ್ ಚರ್ಚೆ ಮಾಡ್ತಾರೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳು ಗೊಂದಲ ಸೃಷ್ಟಿಸಬಾರದು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಅಲ್ಲದೆ, ಪಕ್ಷದಲ್ಲಿ ನಾಯಕತ್ವ ವಿಚಾರವಾಗಿಯೂ ಗೊಂದಲ ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಯಾರೋ ಒಬ್ಬಬ್ಬರಿಗೆ ಬೇಸರವಾಗಿರಬಹುದು. ಅಂಥವರನ್ನು ಅರುಣ್ ಸಿಂಗ್ ಕರೆದು ಮಾತನಾಡುತ್ತಾರೆ ಎಂದಿದ್ದಾರೆ.
Advertisement