ಬೆಂಗಳೂರು: ನಾಯಕತ್ವ ಬದಲಾವಣೆ ಬಗ್ಗೆ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾರ್ಟಿಯಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದ್ದು, ಪಾರ್ಲಿಮೆಂಟರಿ ಬೋರ್ಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅವರು ನಿರ್ಧಾರ ಮಾಡಿದರೆ ಮುಗಿಯಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಯಾವುದೇ ತೀರ್ಮಾನ ಇದ್ದರೂ ಅದನ್ನು ದೆಹಲಿಯ ವರಿಷ್ಠರು ನಿರ್ಧರಿಸುತ್ತಾರೆ. ಅನಾವಶ್ಯಕ ಹೇಳಿಕೆ ನೀಡಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.
ಮೇಲ್ಮನೆ ಸದಸ್ಯ ಹೆಚ್.ವಿಶ್ವನಾಥ್ ನಾಯಕತ್ವ ಬದಲಾವಣೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಯಾರೋ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಬೇಕಿಲ್ಲ. ಗೊಂದಲದ ಹೇಳಿಕೆ ನೀಡುವುದರಿಂದ ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಬೇರೆಯದ್ದೇ ಸಂದೇಶ ಹೋಗುತ್ತದೆ. ನಮ್ಮ ಆದ್ಯತೆ ವ್ಯಕ್ತಿಗತವಾದುದಲ್ಲ, ಜನರ ಹಿತದ ಕಡೆ ನಮ್ಮ ಗಮನವಿರಬೇಕು ಎಂಬುದೇ ನಾನು ಕಲಿತ ಸಂಸ್ಕಾರ, ಸಂಸ್ಕೃತಿಯಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
17 ಜನರಿಂದ ಪಕ್ಷ ಹೀಗಾಯಿತೆಂಬ ಸಚಿವ ಈಶ್ವರಪ್ಪ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, 17 ಜನ ಬಂದವರಿಂದಲೇ ನಮ್ಮ ಸರ್ಕಾರ ಬಂದಿದೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಅವರೆಲ್ಲ ಪಕ್ಷದ ಒಳಗೆ ಬಂದಮೇಲೆ ಎಲ್ಲರೂ ಒಂದೇ. ಅವರು ಬಂದಿದ್ದರಿಂದ ನಮಗೆ ಬಹುಮತ ಸಿಕ್ಕಿದೆ. 104 ಮಂದಿಯನ್ನು ರಾಜ್ಯದ ಜನ ಗೆಲ್ಲಿಸಿದ್ದೂ ಸತ್ಯ ಎಂದರು.
ಹದಿನೇಳು ಮಂದಿ ಬಂದಿದ್ದಕ್ಕೆ ರಾಜಕೀಯ ಬೇಡ.ಅವರನ್ನು ನಾವು ನಮ್ಮವರೆಂದೇ ಪರಿಗಣಿಸುತ್ತೇವೆ. 104 ಬಿಜೆಪಿ ಶಾಸಕರು + 17 ಶಾಸಕರು ಬಂದಿರೋದಕ್ಕೆ ಸರ್ಕಾರ ಬಂದಿದ್ದು ಇಬ್ಬರಿದಂಲೂ ಸರ್ಕಾರ ಬಂದಿದೆ. ಅದೇರಡು ಸತ್ಯ. ಈಗ ಹೊರಗಿನವರು ಬಂದವರೂ ಸಹ ನಮ್ಮವರು. ಪಕ್ಷದಲ್ಲಿ ಏರಿಳಿತ ಇದ್ದೇ ಇರುತ್ತದೆ. ಹಾಗಂತ ಪಕ್ಷಕ್ಕೆ ಹಾನಿಯಾಗಲು ಬಿಡುವುದಿಲ್ಲ. ಸರ್ಕಾರ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಿ.ಟಿ.ರವಿ ಹೇಳಿದರು.
Advertisement