ಬೆಂಗಳೂರು: ಲಾಕ್ ಡೌನ್ ಹೇರಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಡವರಿಗೆ ವಿಶೇಷ ಹಣಕಾಸು ಪ್ಯಾಕೇಜ್ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್ ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 14 ದಿನಗಳ ಲಾಕ್ಡೌನ್'ನಿಂದಾಗಿ ಬೀದಿ ಬದಿ ವ್ಯಾಪಾರಿಗಳು ಮತ್ತು ಕಾರ್ಮಿಕರು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗೆ ಬಡವರಿಗೆ ಖಾತೆಗೆ 10,000 ರೂ.ಗಳನ್ನು ವರ್ಗಾಯಿಸುವ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಂದು ಆಗ್ರಹಿಸಿದರು.
ರೈತರ ಬೆಳೆಗಳನ್ನು ಖರೀದಿಸುವವರು ಇಲ್ಲ ಮತ್ತು ಸಚಿವರು ಯಾರೂ ರೈತರ ಹೊಲಗಳಿಗೆ ಭೇಟಿ ನೀಡುತ್ತಿಲ್ಲ. ಸರ್ಕಾರ ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಿರುವುದಾಗಿ ಹೇಳುತ್ತಿದೆ. ಮೊದಲು ಎರಡನೇ ತರಂಗವನ್ನು ನಿಯಂತ್ರಿಸೋಣ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಲಸಿಕೆ ಅಭಿಯಾನದಲ್ಲಿ ಕರ್ನಾಟಕ ಹಿಂದೆ ಉಳಿದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದ ಯೋಜನೆಗಳ ಕುರಿತು ಸ್ಪಷ್ಟನೆಗಳೇ ಸಿಗುತ್ತಿಲ್ಲ. ಲಸಿಕೆಗಾಗಿ ನಾನೂ ಕೂಡ ಹೆಸರು ನೋಂದಾವಣಿ ಮಾಡಲು ಮುಂದಾಗಿದ್ದೆ. ಆದರೆ, ಸಾಧ್ಯವಾಗಲಿಲ್ಲ. ನನ್ನ ಮಕ್ಕಳಿಗೆ ಲಸಿಕೆ ಕೊಡಿಸಲು ಪ್ರಯತ್ನಿಸಿದ್ದೆ. ಆದರೆ, ನೋಂದಾವಣಿ ಸಾಧ್ಯವಾಗಲಿಲ್ಲ. ಸಿಇಬಿ ಬೋರ್ಡ್ ಸೀಟ್ ಕುರಿತು ಮಾಹಿತಿ ನೀಡಿದಂತೆ ಸರ್ಕಾರ ಕೂಡ ಲಸಿಕೆ ಕುರಿತು ಮಾಹಿತಿ ನೀಡಲಿ. ಫಲಾನುಭವಿಗಳಿಗೆ ಲಸಿಕೆ ನೀಡಲು ಯಾವ ರೀತಿಯ ಯೋಜನೆ ರೂಪಿಸಲಾಗಿದೆ ಎಂಬುದರ ಮಾಹಿತಿಯನ್ನು ಸರ್ಕಾರದಿಂದ ಕೇಳಲಾಗಿತ್ತು. ಆದರೆ, ನನಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ.
ಕೋವಿಡ್ ಲಸಿಕೆ ಪಡೆದುಕೊಳ್ಳಲು ಹೆಸರು ನೋಂದಾಯಿಸುವ ಕೋವಿನ್ ಮತ್ತು ಆರೋಗ್ಯ ಸೇತು ವೇದಿಕೆಗಳಲ್ಲಿ ಸ್ಲಾಟ್ಗಳನ್ನು ಪಡೆದುಕೊಳ್ಳುವುದು ಸವಾಲಾಗಿದೆ. ಒಟಿಪಿ ಪಡೆಯಲು ಸಮಸ್ಯೆಯಿದೆ. ಸ್ಮಾರ್ಟ್ ಫೋನ್ ಗಳಿಲ್ಲದವರು ಏನು ಮಾಡಬೇಕು? 45 ವರ್ಷ ಮೇಲ್ಪಟ್ಟ 65 ಲಕ್ಷ ಜನರು ಇನ್ನೂ 2ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕಿದೆ. ಈಗಲೇ ರಾಜ್ಯದಲ್ಲಿ ಲಸಿಕೆಯ ಅಭಾವ ಎದುರಾಗಿದೆ. ಇದಕ್ಕೆ ಪರಿಹಾರವೇನು? ಜನರ ಜೀವವನ್ನು ಸರ್ಕಾರ ಅಪಾಯಕ್ಕೆ ಸಿಲುಕಿಸುತ್ತಿದೆ. ಪ್ರಮುಖವಾಗಿ ಹಿರಿಯ ನಾಗರೀಕರನ್ನು ಎಂದು ಕಿಡಿಕಾರಿದ್ದಾರೆ.
Advertisement