ಬೆಂಗಳೂರು: ಇತ್ತೀಚಿಗೆ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಫೋಟೋ ಇಡದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಸಂಭಾಷಣೆ ಮೈಕ್ ನಲ್ಲಿ ದಾಖಲಾಗಿದ್ದು, ಬಿಜೆಪಿ ಮುಖಂಡರ ವಾಕ್ ಪ್ರಹಾರಕ್ಕೆ ದಾರಿ ಮಾಡಿಕೊಟ್ಟಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಇವತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿ ಕೂಡಾ ಇದೆ. ಏಕೆ? ಅವರ ಫೋಟೋ ಇಟ್ಟಿಲ್ಲ ಎಂದು ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ಡಿಕೆ ಶಿವಕುಮಾರ್, ಸರ್ದಾರ್ ಪಟೇಲ್ ಅವರ ಫೋಟೋವನ್ನು ನಾವು ಇಡಲ್ಲ ಅಂತಾರೆ. ನಂತರ ಇದನ್ನೇ ಬಿಜೆಪಿಯವರು ಅಡ್ವಾನ್ ಟೆಂಜ್ ಆಗಿ ಬಳಸಿಕೊಳ್ಳುತ್ತಾರೆ. ಪಟೇಲ್ ಅವರ ಫೋಟೋ ಇಡುವಂತೆ ಶಿವಕುಮಾರ್ ಅವರಿಗೆ ಹೇಳುತ್ತಾರೆ. ನಂತರ ಶಿವಕುಮಾರ್ , ಸಿಬ್ಬಂದಿಗೆ ಹೇಳಿ ಫೋಟೋವನ್ನು ಇಡಲಾಗುತ್ತದೆ.
ಈ ವಿಡಿಯೋವನ್ನು ಇದೀಗ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಮುಖಂಡರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮತ್ತಿತರರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ನಡೆಯನ್ನು ಟೀಕಿಸುತ್ತಿದ್ದಾರೆ.
Advertisement