ಹೇಗೆ ಮಾತನಾಡಬೇಕೆಂಬುದನ್ನು ಹೆಚ್'ಡಿಕೆ ತಮ್ಮ ತಂದೆ ದೇವೇಗೌಡರಿಂದ ಕಲಿಯಲಿ: ಅರುಣ್ ಸಿಂಗ್
ಹಾಸನ: ರಾಜಕೀಯ ಪಕ್ಷಗಳ ಹಿರಿಯ ನಾಯಕರ ವಿರುದ್ದ ಆತುರದ ಹೇಳಿಕೆ ನೀಡುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಿಲ್ಲಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಹೇಳಿದ್ದಾರೆ.
ಪಟ್ಟಣದಲ್ಲಿ ಬುಧವಾರ ನಡೆದ ಮಂಡ್ಯ ಮತ್ತು ಹಾಸನ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಿರಿಯರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ನನಗೆ ಗೌರವವಿದೆ. ಅವರ ಮಗೆ ಇತರರಿಗೆ ಗೌರವ ಕೊಡುವುದನ್ನು, ಯಾವ ರೀತಿ ಮಾತನಾಡಬೇಕೆಂಬುದನ್ನು ತಂದೆಯನ್ನು ನೋಡಿ ಕಲಿಯಲಿ ಎಂದು ತಿರುಗೇಟು ನೀಡಿದ್ದಾರೆ.
ಹೆಚ್.ಡಿ.ದೇವೇಗೌಡ ಅವರು ಎಷ್ಟು ಗೌರವಯುತವಾಗಿ ನಡೆದುಕೊಳ್ಳುತ್ತಾರೆ. ಕುಮಾರಸ್ವಾಮಿಯವರು ಲೂಸ್ ಟಾಕ್ ವ್ಯಕ್ತಿತ್ವ. ಸಾರ್ವಜನಿಕರು ಲೂಸ್ ಟಾಕ್ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ರಾಜನೀತಿಗೆ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು. ರಾಜಕೀಯದಲ್ಲಿ ಮರ್ಯಾದೆ ಸಿಗಬೇಕಾದರೆ ಮರ್ಯಾದೆಯುತವಾಗಿ ಮಾತನಾಬೇಕೆಂದು ತಿಳಿಸಿದ್ದಾರೆ.
ಹಿಂದೆ ಹೇಳಿಕೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿಯವರು, ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಲು ಬಂದಿಲ್ಲ. ಹಣ ವಸೂಲಿ ಮಾಡಿಕೊಂಡು ಹೋಗುವ ಏಜೆಂಟ್ ಆಗಿ ಬಂದಿದ್ದಾರೆಂದು ಹೇಳಿದ್ದರು.