ರೌಡಿ ಲಿಸ್ಟ್ ನಲ್ಲಿ ಇದ್ದವರೆಲ್ಲ ರೌಡಿಗಳು ಎಂದು ಹೇಳಲಾಗದು, ನನ್ನ ಹೆಸರು ಕೂಡ ಇತ್ತು: ಸಿ.ಟಿ.ರವಿ
ಬೆಂಗಳೂರು: ರೌಡಿ ಲಿಸ್ಟ್ ನಲ್ಲಿ ಇದ್ದವರೆಲ್ಲ ರೌಡಿಗಳು ಎಂದು ಹೇಳಲಾಗದು. ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ಸ್ಪಷ್ಟನೆ ನೀಡಿದ್ದಾರೆ' ಎಂದು ಹೇಳಿದರು.
ರಾಜಕೀಯ ಕಾರಣಕ್ಕಾಗಿ 1990ರ ದಶಕದಲ್ಲಿ ನನ್ನ ಹೆಸರನ್ನು ಸಮಾಜಘಾತುಕರ ಪಟ್ಟಿಗೆ ಸೇರಿಸಿ ಪೊಲೀಸ್ ಠಾಣೆಯಲ್ಲಿ ಫೋಟೋ ಅಂಟಿಸಿದ್ದರು. ರೌಡಿಶೀಟರ್ ಹೆಸರಿದ್ದವರೆಲ್ಲ ರೌಡಿಗಳು ಎನ್ನಲಾಗದು. ಸೈಲೆಂಟ್ ಸುನಿಲ್, ಬೆತ್ತನಗೆರೆ ಶಂಕರ್, ವಿಲ್ಸನ್ ಗಾರ್ಡನ್ ನಾಗಾ, ರವಿ ಹೆಸರುಗಳು ಗೊತ್ತಿಲ್ಲ, ಆ ಬಗ್ಗೆ ಮಾಹಿತಿಯೂ ಇಲ್ಲ. ಪಕ್ಷದ ತಂತ್ರಗಾರಿಕೆ ಬದಲಾಗುತ್ತದೆಯೇ ಹೊರತು ನೀತಿ- ನಿಯತ್ತು ಬದಲಾಗದು. ರೌಡಿಗಳ ಸೇರ್ಪಡೆಗೆ ಅವಕಾಶವಿಲ್ಲ ಎಂಬ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಯನ್ನೇ ಪುನರುಚ್ಚರಿಸಬಯಸುವೆ ಎಂದು ತಿಳಿಸಿದ್ದಾರೆ.
''ಅಭಿವೃದ್ಧಿ, ರಾಷ್ಟ್ರವಾದ ನಮ್ಮ ಅಜೆಂಡ. ಈ ವಿಷಯದಲ್ಲಿ ಹೊಂದಾಣಿಕೆ ಇಲ್ಲ. ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ಬೊಮ್ಮಾಯಿಯವರ ನಿಲುವನ್ನು ಸ್ವಾಗತಿಸುತ್ತೇನೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಂವಿಧಾನಕರ್ತೃ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್ ನಿಲುವೇನು ಎಂದು ಪ್ರಶ್ನಿಸಿದ್ದಾರೆ.
ಅಸ್ಪೃಷ್ಯತೆಗೆ ನಮ್ಮಲ್ಲಿ ಜಾಗ ಇಲ್ಲ. ಜಾತಿ ರಾಜಕಾರಣ ಇದ್ದಾಗ ದಲಿತ ದೌರ್ಜನ್ಯ ಹೆಚ್ಚಾಗಿರುತ್ತದೆ. ಹಿಂದುತ್ವ ಇದ್ದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ಇದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ