ನೇಕಾರರ ಓಲೈಸಲು ಬಿಜೆಪಿ ಮುಂದು: 'ನಿಮ್ಹತ್ರಾಇದ್ಯಾಉತ್ತರ' ಹ್ಯಾಷ್ ಟ್ಯಾಗ್ ಆರಂಭಿಸಿ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ನೇಕಾರರನ್ನು ಸಂಘಟಿಸಲು ಬಿಜೆಪಿ ಮುಂದಾಗಿದ್ದು, 'ನಿಮ್ಹತ್ರಾಇದ್ಯಾಉತ್ತರ' ಹ್ಯಾಗ್ ಟ್ಯಾಂಗ್ ಆರಂಭಿಸುವ ಮೂಲಕ ಬಿಜೆಪಿಯ ಈ ಪ್ರಯತ್ನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಲೇವಡಿ ಮಾಡಿದೆ.
ಶುಕ್ರವಾರ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ನೇಕಾರರ ನೆರವಿಗಾಗಿ ರೂ.1000 ಕೋಟಿಯ ದೇವರ ದಾಸಿಮಯ್ಯ ನಿಧಿ ಸ್ಥಾಪಿಸುತ್ತೇವೆ, ನೇಕಾರರ ಅಭಿವೃದ್ಧಿ ಮಂಡಳಿ ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಈಗ ನಿಧಿಯೂ ಇಲ್ಲ, ಮಂಡಳಿಯೂ ಇಲ್ಲ. ಸಿಎಂ ಬೊಮ್ಮಾಯಿ ಅವರೇ, ತಮ್ಮ ಪಕ್ಷ ನೀಡಿದ್ದ ಕೇವಲ ಶೇ.10 ಭಾರವಸೆಗಳನ್ನೂ ಈಡೇರಿಸಲಾಗದ ತಾವು ಯಾವ ಮುಖವಿಟ್ಟುಕೊಂಡು ಜನರ ಬಳಿ ಹೋಗುವಿರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹ್ಯಾಷ್ ಟ್ಯಾಗ್ ಆಗಿ ಹೇ ಸಿಎಂ ನಿಮ್ಹತ್ರಾಇದ್ಯಾಉತ್ತರ ಬಳಸಿದ್ದಾರೆ.
ಬಿಜೆಪಿಗೆ ‘ಘರ್ ವಾಪ್ಸಿ’ ಮಾಡಿದ ಮಾಜಿ ಎಂಎಲ್ಸಿ ಎಂಡಿ ಲಕ್ಷ್ಮಿನಾರಾಯಣ ನೇಕಾರರನ್ನು ಸಂಘಟಿಸಲು ಆರಂಭಿಸಿದ್ದು, ಕೊಳ್ಳೇಗಾಲ ಮತ್ತು ತುಮಕೂರಿನಲ್ಲಿ ಸಮಾವೇಶ ನಡೆಸಿದ್ದಾರೆ.
2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನೇಕಾರರ ಮತವೇ ಪ್ರಮುಖವಾಗಿರುವ 58 ಸ್ಥಾನಗಳ ಪೈಕಿ ಕಾಂಗ್ರೆಸ್ 30 ಕ್ಷೇತ್ರಗಳಲ್ಲಿ, ಬಿಜೆಪಿ 23, ಜೆಡಿಎಸ್ 4 ಮತ್ತು ಬಿಎಸ್ಪಿ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
50 ಸಾವಿರಕ್ಕೂ ಹೆಚ್ಚು ನೇಕಾರ ಮತಗಳನ್ನು ಹೊಂದಿರುವ ಬೆಳಗಾವಿ ದಕ್ಷಿಣ ಮತ್ತು ತೇರದಾಳದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 20 ಸಾವಿರಕ್ಕೂ ಹೆಚ್ಚು ಮತದಾರರಿದ್ದ ಜಮಖಂಡಿ ಮತ್ತು ಬಾದಾಮಿಯಲ್ಲಿ ಕಾಂಗ್ರೆಸ್ ಗೆದ್ದಿತ್ತು.
ಹೀಗಾಗಿ 2023ರಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲು ಮುಂದಾಗಿದ್ದು, ಕಾಂಗ್ರೆಸ್ಗೆ ಪ್ರತಿತಂತ್ರ ಹೂಡಲು ಮುಂದಾಗಿದೆ.
ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ ಅವರು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮುಂದಿನ ವಾರ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ