ವಿಧಾನಸಭೆ ಚುನಾವಣೆಗೆ ಬಿಜೆಪಿ ರಣತಂತ್ರ: ಹೊರರಾಜ್ಯಗಳ ನಾಯಕರ ನಿಯೋಜನೆ; ಕೇಂದ್ರ ನಾಯಕರ ಆಜ್ಞೆಯಂತೆ ಮೀಸಲಾತಿ ದಾಳ!

2023ರ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟನೆ ನೀಡಿದೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯನ್ನು ಹತ್ತು ವಿಭಾಗಗಳನ್ನಾಗಿ ಮಾಡಿ ಅದರಲ್ಲಿ ಪಕ್ಷವನ್ನು ಹುರಿದುಂಬಿಸುವ ಜವಾಬ್ದಾರಿಯನ್ನು ಹೊರರಾಜ್ಯದ ರಾಷ್ಟ್ರೀಯ ನಾಯಕರಿಗೆ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಬಗ್ಗೆ ಉತ್ತಮ ಅರಿವು  ಹೊಂದಿರುವ ಈ ನಾಯಕರು ನವೆಂಬರ್‌ನಲ್ಲಿ ಭೇಟಿ ಆರಂಭಿಸಲಿದ್ದಾರೆ. ಪಕ್ಷದ ಬಗ್ಗೆ ತಳ ಮಟ್ಟದ ಸಮೀಕ್ಷೆ ವರದಿಗಳನ್ನು ಸಂಗ್ರಹಿಸಲಿದ್ದಾರೆ. ಹಾಗೂ ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಸ್ಮೃತಿ ಇರಾನಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಇತರ ನಾಯಕರನ್ನು ವಿಧಾನಸಭೆ ಚುನಾವಣೆದೆ ನಿಯೋಜಿಸುವ  ಸಾಧ್ಯತೆಯಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರ ನಿಧನದ ನಂತರ ಆಡಳಿತ ವಿರೋಧಿ ಮತ್ತು ಪಕ್ಷದ ನಾಯಕರ ಒಂದು ವರ್ಗದ ಸಿಟ್ಟು ಸೇರಿದಂತೆ ಹಲವು ಸಮಸ್ಯೆಗಳನ್ನು ಬಿಜೆಪಿ ಎದುರಿಸುತ್ತಿರುವ ಕಾರಣ,  ರಾಷ್ಟ್ರೀಯ ನಾಯಕರು ಅವುಗಳನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದು ಅವರು ಹೇಳಿದರು.

ಉತ್ತರ ಭಾರತದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಇದೇ ತಂತ್ರವನ್ನು ಅನ್ವಯಿಸಿತ್ತು ಮತ್ತು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಅದನ್ನು ಮುಂದುವರೆಸಿದೆ. ಕರ್ನಾಟಕದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈಗ ಗುಜರಾತ್‌ನಲ್ಲಿ ಇಂತಹ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.

ಪಕ್ಷದ ಹೈಕಮಾಂಡ್, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲೂ ತಂತ್ರವನ್ನು ಪ್ರಯೋಗಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ, ಹೈಕಮಾಂಡ್ ಅಭ್ಯರ್ಥಿಗಳ ಗೆಲುವಿನ ಜೊತೆಗೆ ಅವರ ನಿಷ್ಠೆಯನ್ನು ನೋಡುತ್ತದೆ ಮತ್ತು ಇತರ ಪಕ್ಷಗಳಿಂದ ಸೇರುವವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಪಷ್ಟ ಜನಾದೇಶ ಇಲ್ಲದ ಸಂದರ್ಭದಲ್ಲೂ ಹೈಕಮಾಂಡ್ ಸರ್ಕಾರ ರಚಿಸುವ ಹಂತಕ್ಕೆ ಹೋಗಬಹುದು ಎಂದು ಭಾವಿಸಿರುವ ಇತರ ಪಕ್ಷಗಳ ನಾಯಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.

ಹಿಂದಿನಂತೆ ಜಾತಿ ಸಮೀಕರಣವು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದೆಂದು ಹೈಕಮಾಂಡ್ ಗ್ರಹಿಸಿದ್ದರಿಂದ ಬೊಮ್ಮಾಯಿ ಸರ್ಕಾರ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿದೆ. ವಿಶೇಷವಾಗಿ ಪಂಚಮಶಾಲಿ ಲಿಂಗಾಯತರಿಗೆ 2ಎ ಮೀಸಲಾತಿ  ವಿಚಾರವನ್ನು ಸರ್ಕಾರ ಪರಿಹರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬೊಮ್ಮಾಯಿ ಅವರ ಪ್ರತಿಯೊಂದು ನಡೆಯಲ್ಲೂ ಮಾರ್ಗದರ್ಶನ ನೀಡುತ್ತಿರುವ ಹೈಕಮಾಂಡ್ ಕೋಟಾ ವಿಚಾರದಲ್ಲೂ ಸಲಹೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com