ಆಡಿಯೋ ವೈರಲ್: ತಮ್ಮದೇ ಪಕ್ಷದ ಮಾಧುಸ್ವಾಮಿಗೆ ತಿರುಗೇಟು ಕೊಟ್ಟ ಸಚಿವ ಸೋಮಶೇಖರ್, ಹೇಳಿದ್ದೇನು?

ಇತ್ತೀಚೆಗೆ ವೈರಲ್ ಆದ ಆಡಿಯೋವೊಂದು ಬಿಜೆಪಿ ನಾಯಕರಲ್ಲೇ ಮಾತಿನ ಸಮರಕ್ಕೆ ಎಡೆ ಮಾಡಿಕೊಟ್ಟಿದ್ದು, ಸಚಿವ ಮಾಧುಸ್ವಾಮಿಗೆ ಸಹಕಾರ ಸಚಿವ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮಾಧುಸ್ವಾಮಿ ವರ್ಸಸ್ ಸೋಮಶೇಖರ್
ಮಾಧುಸ್ವಾಮಿ ವರ್ಸಸ್ ಸೋಮಶೇಖರ್

ಬೆಂಗಳೂರು: ಇತ್ತೀಚೆಗೆ ವೈರಲ್ ಆದ ಆಡಿಯೋವೊಂದು ಬಿಜೆಪಿ ನಾಯಕರಲ್ಲೇ ಮಾತಿನ ಸಮರಕ್ಕೆ ಎಡೆ ಮಾಡಿಕೊಟ್ಟಿದ್ದು, ಸಚಿವ ಮಾಧುಸ್ವಾಮಿಗೆ ಸಹಕಾರ ಸಚಿವ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

ತಮ್ಮ ಬಗ್ಗೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಆಡಿದ್ದಾರೆ ಎನ್ನಲಾದ ಮಾತಿನ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ತಮ್ಮದೇ ಪಕ್ಷದ ಸಹೋದ್ಯೋಗಿಗೇ ತಿರುಗೇಟು ನೀಡಿದ್ದಾರೆ. ‘ಮಾಧುಸ್ವಾಮಿ ಅವರು ತಮ್ಮನ್ನು ತಾವೇ ಮೇಧಾವಿ ಎಂದು ತಿಳಿದಿದ್ದಾರೆ. ಆ ಮನೋಭಾವದಿಂದ ಹೊರಬರಬೇಕು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಶೇಖರ್‌, 'ಬಹುಶಃ ಮಾಧುಸ್ವಾಮಿ ಅವರ ಸಣ್ಣ ನೀರಾವರಿ ಇಲಾಖೆ ಕುಂಟತ್ತಿರಬೇಕಷ್ಟೇ. ಸರ್ಕಾರ ಮತ್ತು ಸರ್ಕಾರದ ಎಲ್ಲ ಇಲಾಖೆಗಳು ಉತ್ತಮವಾಗಿಯೇ ಆಡಳಿತ ನಡೆಸುತ್ತಿದೆ. ಇದನ್ನು ಯಾರೂ ಬೊಟ್ಟು ಮಾಡಿ ತೋರಿಸಬೇಕಿಲ್ಲ.. ತಾನೊಬ್ಬನೇ ಬುದ್ಧಿವಂತ, ಮೇಧಾವಿ ಎಂದು ಮಾಧುಸ್ವಾಮಿ ಅವರು ತಿಳಿದಂತಿದೆ. ಸಂಪುಟದಲ್ಲಿ ಅನೇಕ ಅನುಭವಿಗಳು ಮತ್ತು ಹಿರಿಯ ಸಚಿವರಿದ್ದಾರೆ. ಮೊದಲು ಅಂತಹ ಮನೋಭಾವದಿಂದ ಅವರು ಹೊರಬರಬೇಕು’ ಎಂದು ಕಿಡಿಕಾರಿದರು. 

‘ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷವಾಗುತ್ತಿದ್ದು, ಆ.28ರಂದು ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯುತ್ತದೆ. ರಾಜ್ಯದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದನ್ನು ಅವರೇ ಮಾಧ್ಯಮಗಳ ಮುಂದೆ ಹೇಳಬೇಕು. ಆದರೆ ಸರ್ಕಾರವನ್ನು ನಾವೇ ತಳ್ಳುತ್ತಿದ್ದೇವೆ ಎಂಬ ರೀತಿ ಅವರು ಹೇಳಿಕೆ ನೀಡಿದ್ದರೆ, ಅದು ಸರಿಯಲ್ಲ. ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ಯೋಜನೆಗಳನ್ನು ನೋಡುವುದಿಲ್ಲವೇ? ನಾಳೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿಯೂ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಖಾರವಾಗಿ ಹೇಳಿದರು.

ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದಿದ್ದ ಮಾಧುಸ್ವಾಮಿ
ಇನ್ನು ವೈರಲ್ ಆಡಿಯೋದಲ್ಲಿ ‘ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್‌ ಮಾಡುತ್ತಿದ್ದೇವೆ ಅಷ್ಟೇ’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಆಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ‘ಈ ಮೂಲಕ ಮಾಧುಸ್ವಾಮಿ ಸತ್ಯ ಒಪ್ಪಿಕೊಂಡಿದ್ದಾರೆ. ಇದನ್ನು ಬಹಿರಂಗವಾಗಿಯೂ ಒಪ್ಪಿಕೊಳ್ಳಲು ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದರು. 

ಜೆ.ಸಿ. ಮಾಧುಸ್ವಾಮಿ ಅವರು ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲದ ಕುರಿತ ಅವ್ಯವಹಾರದ ಬಗ್ಗೆ ಸಾಮಾಜಿಕ ಕಾಯಕರ್ತರೊಂದಿಗೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್‌ ಆಗಿತ್ತು. ಅದರಲ್ಲಿ ‘ಸಾಲದ ಬಗ್ಗೆ ಸಹಕಾರ ಸಚಿವ ಸೋಮಶೇಖರ್‌ಗೂ ಹೇಳಿದೆ. ಅವನೇನೂ ಕ್ರಮ ಜರುಗಿಸ್ತಾ ಇಲ್ಲ.. ಏನು ಮಾಡೋದು? ಸರ್ಕಾರವನ್ನು ನಾವು ನಡೆಸುತ್ತಿಲ್ಲ. ಮ್ಯಾನೇಜ್‌ ಮಾಡುತ್ತಿದ್ದೇವೆ. ಇನ್ನೆಂಟು ತಿಂಗಳು ತಳ್ಳಿದರೆ ಸಾಕು ಎಂದು ತಳ್ಳುತ್ತಿದ್ದೇವೆ’ ಎಂದು ಹೇಳಿದ್ದು ಕೇಳಿಬರುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com