ಕಾಂಗ್ರೆಸ್ ಪಕ್ಷಕ್ಕೆ ಆಜಾದ್ ರಾಜಿನಾಮೆ ನೀಡಿದ್ದು ಹೆತ್ತ ತಾಯಿಗೆ ಮಾಡಿದ ದ್ರೋಹ: ಡಿಕೆ ಶಿವಕುಮಾರ್

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ, ಗಾಂಧಿ ಕುಟುಂಬದಿಂದ ಬೆಳದಿದ್ದ ಗುಲಾಂ ನಬಿ ಆಜಾದ್ ಅವರು ಉಪಕಾರ ಸ್ಮರಣೆ ಮಾಡದೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್-ಡಿಕೆ ಶಿವಕುಮಾರ್
ಗುಲಾಂ ನಬಿ ಆಜಾದ್-ಡಿಕೆ ಶಿವಕುಮಾರ್

ಬೆಂಗಳೂರು: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ, ಗಾಂಧಿ ಕುಟುಂಬದಿಂದ ಬೆಳದಿದ್ದ ಗುಲಾಂ ನಬಿ ಆಜಾದ್ ಅವರು ಉಪಕಾರ ಸ್ಮರಣೆ ಮಾಡದೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಗುಲಾಂ ನಬಿ ಆಜಾದ್ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ದುಃಖದ ಸಂಗತಿ. ಉಪಕಾರ ಸ್ಮರಣೆ ಇಲ್ಲದಿರುವುದಕ್ಕೆ ಇದು ಉದಾಹರಣೆಯಾಗಿದೆ. ದೇಶ ಕಷ್ಟದ ಕಾಲದಲ್ಲಿರುವಾಗ ಗುಲಾಂನಬಿ ಹೀಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.

ಭಾರತ್ ಜೋಡೋ ಮೂಲಕ ದೇಶಕ್ಕಾಗಿ ಹೋರಾಟ ಮಾಡುವ ಬಗ್ಗೆ ಉದಯಪುರದಲ್ಲಿ ಚರ್ಚೆ ಮಾಡಲಾಯಿತು. 600 ಜನ ನಾಯಕರ ಉಪಸ್ಥಿತಿ ವೇಳೆ ಆಜಾದ್ ಕೂಡ ಇದ್ದರೂ. ಆಜಾದ್ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿರ್ಧಾರ ಕೈಗೊಳ್ಳುವ ತಂಡದಲ್ಲಿದ್ದರು. ಅವರಿಗೆ ಕಾಂಗ್ರೆಸ್ ಪಕ್ಷ 40 ವರ್ಷದ ಅಧಿಕಾರ ನೀಡಿತ್ತು. ಇದೆಲ್ಲವನ್ನು ಅವರು ಮರೆತಿದ್ದಾರೆ ಎಂದರು.

ಗುಲಾಂನಬಿ ಆಜಾದ್ ಎಂಬ ಹೆಸರು ಬರಲು ಮಾಜಿ ಪ್ರಧಾನಿ ನೆಹರೂ, ಗಾಂಧಿ ಕುಟುಂಬವೇ ಕಾರಣ. ಹೀಗಿದ್ದರೂ ಪಕ್ಷಕ್ಕೆ ರಾಜಿನಾಮೆ ನೀಡುವ ಮೂಲಕ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. 

ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ ಜಿ 23 ನಾಯಕರ ಗುಂಪಿನ ಸದಸ್ಯರಾಗಿದ್ದ ಗುಲಾಂ ನಬಿ ಆಜಾದ್ ಅವರು ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದ ಪ್ರಮುಖ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನಗಳ ನಂತರ ಆಜಾದ್ ರಾಜೀನಾಮೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com