ಮೈಸೂರು: ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್ ಸೇರುವಂತೆ ಕರೆದಿಲ್ಲ. ಜೆಡಿಎಸ್ನಲ್ಲಿ ಉಳಿದುಕೋ ಎಂದೂ ಹೇಳಿಲ್ಲ. ಆದರೆ, ಬಿಜೆಪಿಗೆ ಹೋಗಬೇಡ ಎಂದು ಸಲಹೆ ನೀಡಿದ್ದಾರೆ’ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿದ್ದನ್ನು ಈಗ ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ನನ್ನ ನಿರ್ಧಾರ ಏನು ಎಂಬುದನ್ನು ಎರಡು ಮೂರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.
ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ. ಹೀಗಾಗಿ, ಸುರಕ್ಷತೆ ಇರುವ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋತಿದ್ದರಿಂದಾಗಿ ಅಲ್ಲಿ ಮತ್ತೆ ಸ್ಪರ್ಧಿಸಲು ಅವರಿಗೆ ಆತಂಕವಿದೆ ಎಂದರು.
ಒಕ್ಕಲಿಗರು ತಮ್ಮನ್ನು ಬೆಂಬಲಿಸಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇತ್ತ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗರು ನನ್ನ ಜೊತೆ ಇದ್ದಾರೆ ಎಂದು ಹೇಳುವ ವಿಚಾರಕ್ಕೂ, ಜನರ ಮನಸ್ಥಿತಿ ಈಗ ತೀರ್ಮಾನವಾಗುವುದಿಲ್ಲ, ಅದಕ್ಕೆ ಇನ್ನೂ ಸಮಯಬೇಕು ಎಂದರು.
Advertisement