'ಸಿದ್ದರಾಮೋತ್ಸವ' ಸಭೆ ಕೈ-ಕೈ ಮಿಲಾಯಿಸುವ ಹಂತಕ್ಕೆ: ವಿಡಿಯೋ ಮಾಡಲು ಹೋದ ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ ನಡೆಯುತ್ತಿದ್ದಾಗ ಆ ದೃಶ್ಯಗಳನ್ನು ಸೆರೆ ಹಿಡಿಯಲು ಪತ್ರಕರ್ತರು ಮುಂದಾದಾಗ ಅವರ ಮೇಲೆ ಮಾಜಿ ಸ್ಪೀಕರ್ ಕೆ ಆರ್​ ರಮೇಶ್ ಕುಮಾರ್ ಹಲ್ಲೆ ನಡೆಸಿದ್ದಾರೆ.
ರಮೇಶ್ ಕುಮಾರ್
ರಮೇಶ್ ಕುಮಾರ್

ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ ನಡೆಯುತ್ತಿದ್ದಾಗ ಆ ದೃಶ್ಯಗಳನ್ನು ಸೆರೆ ಹಿಡಿಯಲು ಪತ್ರಕರ್ತರು ಮುಂದಾದಾಗ ಅವರ ಮೇಲೆ ಮಾಜಿ ಸ್ಪೀಕರ್ ಕೆ ಆರ್​ ರಮೇಶ್ ಕುಮಾರ್ ಹಲ್ಲೆ ನಡೆಸಿದ್ದಾರೆ.

ಕಾಂಗ್ರೆಸ್ ಮುಖಂಡರು, ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವೆ ನೂಕಾಟ ತಳ್ಳಾಟದ ಜತೆ ಮಾತಿನ ಯುದ್ದ ನಡೆಯಿತು. ಕಾಂಗ್ರೆಸ್‌ ಕಾರ್ಯಕರ್ತರ ನಡುವೆಯೇ ಗದ್ದಲ, ಗಲಾಟೆ, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಕೋಲಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ‌ಯಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ಎರಡು ಬಣಗಳ ನಡುವೆ ಘರ್ಷಣೆ ನಡೆಯಿತು, ಬ್ಯಾನರ್‌ನಲ್ಲಿ ಕೆಎಚ್ ಮುನಿಯಪ್ಪ ಭಾವಚಿತ್ರ ಇಲ್ಲವೆಂದು ಬೆಂಬಲಿಗರು ಆಕ್ರೋಶ ವ್ಯಕ್ತಡಿಸಿದರು.

ಎರಡು ಬಣದವರ ನಡುವೆ ಮಾತಿಗೆ ಮಾತು ಬೆಳೆದು,ಕಿತ್ತಾಟ ನಢಯುತ್ತಿದ್ದಾಗ ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ರಮೇಶ್ ಕುಮಾರ್ ಕೋಪಗೊಂಡು ಚೇರಿನಿಂದ ಎದ್ದು ಬಂದು ಇಬ್ಬರು ಮಾದ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬೆಳವಣಿಗೆ ನಂತರ ರಮೇಶ್ ಕುಮಾರ್ ಸ್ಥಳದಿಂದ ನಿರ್ಗಮಿಸಿದ್ದರು,  ಅವರ ಬೆಂಬಲಿಗರಾದ- ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಮತ್ತು ಎಂಎಲ್‌ಸಿ ಅನಿಲ್ ಕುಮಾರ್ ಮಾಧ್ಯಮಗಳ ಮುಂದೆ ಕ್ಷಮೆಯಾಚಿಸಿದರು.

ರಮೇಶ್ ಕುಮಾರ್ ನಡೆಯ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ಪತ್ರಕರ್ತರು ಕೇವಲ ಕರ್ತವ್ಯ ನಿರ್ವಹಿಸುತ್ತಿದ್ದು, ಈ ರೀತಿ ವರ್ತನೆ ಅಮಾನವೀಯ ಎಂದು ಬೇಸರ ವ್ಯಕ್ತ ಪಡಿಸಿದರು. ಹಿರಿಯ ನಾಯಕರಾಗಿರುವ ರಮೇಶ್ ಕುಮಾರ್ ಮಾಧ್ಯಮದವರಿಗೆ ಗೌರವ ನೀಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com