ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ರಾಜಕೀಯ ದಿನೇ ದಿನೇ ರಂಗೇರತೊಡಗಿದ್ದು, ಒಂದು ಕಾಲದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಗಾಲಿ ಜನಾರ್ದನ ರೆಡ್ಡಿ ಅವರು, ಇಂದು ಬಿಜೆಪಿ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು, ಈ ಬೆಳವಣಿಗೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.
ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ರಾಜಕೀಯ ಶಕ್ತಿಯಾಗಿದ್ದ ರೆಡ್ಡಿ, ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಬಂಧಿತರಾದಾಗಿನಿಂದಲೂ ರಾಜಕೀಯದಿಂದ ದೂರ ಉಳಿದಿದ್ದರು. ಆದರೀಗ ಮತ್ತೆ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ರೆಡ್ಡಿಯವರಿಗೆ ಈ ಹಿಂದೆ ನ್ಯಾಯಾಲಯ ಬಳ್ಳಾರಿಗೆ ಕಾಲಿಡದಂತೆ ಆದೇಶಿಸಿತ್ತು. ಆದರೆ, ಇದೀಗ ನ್ಯಾಯಾಲಯದ ಅನುಮತಿ ಪಡೆದಿರುವ ರೆಡ್ಡಿಯವರು ಬಳ್ಳಾರಿಗೆ ಭೇಟಿ ನೀಡಿದ್ದಾರೆ.
ಭೇಟಿ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯೊಂದಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿರೋಧ ಪಕ್ಷವಾಗಿರುವ ಕಾಂಗ್ರೆಸ್'ಗೆ ನನ್ನನ್ನು ಟೀಕಿಸುವ ಎಲ್ಲಾ ಹಕ್ಕು ಇದೆ, ಆದರೆ, ಪಕ್ಷ ಕಟ್ಟಲು ಹಾಗೂ ಪಕ್ಷ ಕಟ್ಟಲು ಹಾಗೂ ಅಧಿಕಾರಕ್ಕೆ ಬರಲು ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಅದನ್ನು ನಿರೀಕ್ಷಿಸಿವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನನಗೆ ತೃಪ್ತಿ ಇದೆ. ಶೀಘ್ರದಲ್ಲೇ, ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ನವೆಂಬರ್ 6ರಂದು ಬಳ್ಳಾರಿಯಿಂದ ಹೊರಡಬೇಕಾಗಿದೆ. ಆದರೆ, ನಾನು ಬೆಂಗಳೂರಿಗೆ ಹೋಗುವುದಿಲ್ಲ, ಜನರೊಂದಿಗೆ ಸಂಪರ್ಕದಲ್ಲಿರಲು ಬಳ್ಳಾರಿಯ ಹತ್ತಿರದಲ್ಲೇ ಇರುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮ್ಮ ಸಹೋದರ ಹಾಗೂ ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ಮಾಡಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ, ಸೋಮಶೇಖರ್ ಅವರು ತಮ್ಮ ತಪ್ಪನ್ನು ಅರಿತುಕೊಂಡಿದ್ದಾರೆ ಮತ್ತು ಈಗಾಗಲೇ ಕ್ಷಮೆಯಾಚಿಸಿದ್ದಾರೆಂದರು.
“ಬಳ್ಳಾರಿಯಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ. ಇತ್ತೀಚೆಗೆ ಪಿಎಫ್ಐ ಮತ್ತು ಎಸ್ಡಿಪಿಐ ಮುಖಂಡರನ್ನು ಬಂಧಿಸಲಾಗಿತ್ತು, ಆದರೆ ಅವರ್ಯಾರೂ ಬಳ್ಳಾರಿಯವರಲ್ಲ, ಇದು ಬಳ್ಳಾರಿ ಮುಸ್ಲಿಮರು ದೇಶಕ್ಕೆ ತೋರುವ ಗೌರವವನ್ನು ತೋರಿಸುತ್ತದೆ ಎಂದರು.
Advertisement