ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಬಂಧ ಹಾಳಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಿಲ್ಲ. ಆದರೂ ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ನಲ್ಲಿ ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ಸರಿಯಿದೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ನಾನು ಏಕಾಂಗಿಯಲ್ಲ, ಎಲ್ಲಾ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದು ಹೇಳಿದರು.
ಬಾದಾಮಿ ಕ್ಷೇತ್ರದಿಂದ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಬಾದಾಮಿಯಲ್ಲೇ ಸ್ಪರ್ಧಿಸುವಂತೆ ಆಗ್ರಹಿಸಿ ಸಾವಿರಾರು ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡುತ್ತೇವೆ ಎಂದು ಒತ್ತಡ ಹಾಕಿ ಪತ್ರ ಬರೆದಿದ್ದಾರೆ, ಆದರೆ ನನ್ನ ಮನಸು ಒಪ್ಪುತ್ತಿಲ್ಲ, ಬಾದಾಮಿಗೆ ಹೋಗಿ 2 ತಿಂಗಳಾಗಿದೆ. ವಾರಕ್ಕೊಮ್ಮೆಯೂ ಅಲ್ಲಿ ಇರಲಾಗುತ್ತಿಲ್ಲ. ಕಾರ್ಯಕರ್ತರಿಗೆ, ಜನರಿಗೆ ಸಿಗಲಾಗುತ್ತಿಲ್ಲ, ಕಷ್ಟಕ್ಕೆ ಸ್ಪಂದಿಸಲಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು. ಬಿಜೆಪಿಯವರಿಗೆ ಬುದ್ಧಿ ಇಲ್ಲ. ನನಗೆ ಕ್ಷೇತ್ರ ಇಲ್ಲವೆಂದು ಹೇಳುತ್ತಿದ್ದಾರೆ. ಕ್ಷೇತ್ರ ಇಲ್ಲದಿದ್ದರೆ ಇಷ್ಟೊಂದು ಜನ ಆಹ್ವಾನ ನೀಡುತ್ತಾರೆಯೇ? ಕೋಲಾರದಲ್ಲೇ ನಿಲ್ಲಿ ಎಂದು ಕೆಲವರು ಆಗ್ರಹಿಸುತ್ತಿದ್ದಾರೆ.
ವರುಣದಲ್ಲಿ ಸ್ಪರ್ಧಿಸಿ ಎಂದು ನನ್ನ ಮಗ ಹೇಳುತ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳಬೇಕು ಎಂದು ಜಮೀರ್ ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದರು.
ವರುಣದಿಂದ ಸ್ಪರ್ಧೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ. ವೈಯಕ್ತಿಕವಾಗಿ ಸಿ.ಎಂ.ಇಬ್ರಾಹಿಂ ನನ್ನ ಒಳ್ಳೆಯ ಗೆಳೆಯ. ಅವರು ಭದ್ರಾವತಿಯಿಂದ ಸ್ಪರ್ಧಿಸೋದು ಒಳಿತು. ಅಲ್ಲೀಗ ಪಾಪ ಅಪ್ಪಾಜಿ ಮೃತಪಟ್ಟಿದ್ದಾರೆ. ನಾನು ಎಲ್ಲಿ ನಿಂತುಕೊಳ್ಳಬೇಕು ಎನ್ನುವ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ಆತ್ಮೀಯವಾಗಿ ಹೇಳುವುದಾದರೆ ವೈಯಕ್ತಿಕವಾಗಿ ಬಂದು ಹೇಳಬೇಕು. ಹಿಂದೆ ಭದ್ರಾವತಿಗೆ ಸಿಟ್ಟಿಂಗ್ ಎಂಎಲ್ಎ ಟಿಕೆಟ್ ತಪ್ಪಿಸಿ ಇಬ್ರಾಹಿಂಗೆ ಟಿಕೆಟ್ ಕೊಡಲಾಗಿತ್ತು. ಆದರೆ, ಇಬ್ರಾಹಿಂ ಡಿಪಾಸಿಟ್ ಹೋಯಿತು. ಅವರ ಲೆಕ್ಕಾಚಾರ ತಪ್ಪಾಯ್ತಲ್ಲ ಎಂದರು.
Advertisement