'ಕೈ'ನಲ್ಲಿ ಟಿಕೆಟ್‌ ಬಂಡಾಯ; ಏ.14ರಂದು ರಘು ಆಚಾರ್‌ ಜೆಡಿಎಸ್‌ ಸೇರ್ಪಡೆ, ಪಕ್ಷೇತ್ತರ ಸ್ಪರ್ಧೆ ಸುಳಿವು ನೀಡಿದ ವೈಎಸ್‌ವಿ ದತ್ತಾ

ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಕಹಳೆ ಮೊಳಗಿಸಿದ್ದು, ಕೆಲವರು ಪಕ್ಷ ತೊರೆಯಲು ನಿರ್ಧರಿಸಿದ್ದರೆ, ಇನ್ನು ಕೆಲವರು....
ಡಿಕೆ ಶಿವಕುಮಾರ್ - ಸಿದ್ದರಾಮಯ್ಯ
ಡಿಕೆ ಶಿವಕುಮಾರ್ - ಸಿದ್ದರಾಮಯ್ಯ
Updated on

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಕಹಳೆ ಮೊಳಗಿಸಿದ್ದು, ಕೆಲವರು ಪಕ್ಷ ತೊರೆಯಲು ನಿರ್ಧರಿಸಿದ್ದರೆ, ಇನ್ನು ಕೆಲವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಚಿತ್ರದುರ್ಗದ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಎಂಎಲ್ ಸಿ ರಘು ಆಚಾರ್ ಅವರು ಕಾಂಗ್ರೆಸ್ ತೊರೆದು, ಏಪ್ರಿಲ್ 14 ರಂದು ಜೆಡಿಎಸ್ ಗೆ ಸೇರ್ಪಡೆಯಾಗುವುದಾಗಿ ಶುಕ್ರವಾರ ಹೇಳಿದ್ದಾರೆ.

ಜೆಡಿಎಸ್ ನಾಯಕ ಟಿ ಎ ಶರವಣ ಅವರು ಇಂದು ರಘು ಆಚಾರ್ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಶರವಣ ಅವರು, ಕಾಂಗ್ರೆಸ್ ನಲ್ಲಿ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗಾಗಿ ರಘು ಆಚಾರ್ ಅವರು ಯಾವುದೇ ಷರತ್ತುಗಳಿಲ್ಲದೆ ಜೆಡಿಎಸ್ ಸೇರಲು ಒಪ್ಪಿದ್ದಾರೆ ಎಂದರು.

ಶರವಣ ಭೇಟಿ ಬಳಿಕ ಮಾತನಾಡಿದ ರಘು ಆಚಾರ್ ಅವರು, ಯಾವುದೇ ಷರತ್ತು ವಿಧಿಸದೇ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ. ಟಿಕೆಟ್ ವಿಚಾರ ಇನ್ನೂ ಅಂತಿಮವಾಗಿಲ್ಲ. ಪಕ್ಷ ಸೇರ್ಪಡೆಯಾದ ಬಳಿಕ ನಿರ್ಧಾರವಾಗಲಿದೆ ಎಂದರು.

ಚಿಕ್ಕಮಗಳೂರಿನ ಕಡೂರು ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಕೈತಪ್ಪಿದ ವಿಚಾರವಾಗಿ ವೈಎಸ್‌ವಿ ದತ್ತಾ ಜತೆ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಇಂದು ನಡೆಸಿದ ಸಭೆ ವಿಫಲವಾಗಿದೆ. ಪಕ್ಷೇತರ ಅಭ್ಯರ್ಥಿಯಾಗುವ ಬಗ್ಗೆ ಆನಂದ್ ಸಮ್ಮುಖದಲ್ಲೇ ದತ್ತಾ ಸುಳಿವು ನೀಡಿದ್ದಾರೆ. ಇದು ಕಡೂರು ರಾಜಕೀಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸುಳಿವು ನೀಡಿದೆ.

ಇದಕ್ಕೂ ಮುನ್ನ ಕಾಂಗ್ರೆಸ್ ಟಿಕೆಟ್ ಪಡೆದಿರುವ ಕೆ.ಸಿ.ವೀರೇಂದ್ರ (ಪಪ್ಪಿ) ಅವರು ನನ್ನನ್ನು ಭೇಟಿ ಮಾಡಿ ಸಹಕಾರ ಕೋರಿದ್ದರು. ಆದರೆ ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುವ ಕುರಿತು ನಾನು ಈಗಾಗಲೇ ಘೋಷಿಸಿದ್ದೇನೆ. ಅವರು ಒಳ್ಳೆಯ ಸ್ನೇಹಿತ, ಅವರಿಗೆ ಶುಭ ಹಾರೈಸುತ್ತೇನೆ" ಎಂದರು.

ಪಕ್ಷದ ಮೂಲಗಳ ಪ್ರಕಾರ, ಚಿತ್ರದುರ್ಗದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಎಸ್ ಕೆ ಬಸವರಾಜನ್ ಅವರು ಸಹ ಕಾಂಗ್ರೆಸ್ ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಮತ್ತು ಚರ್ಚಿಸಲು ತಮ್ಮ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆ ಕರೆದಿದ್ದಾರೆ.

ಇನ್ನು ಮಂಡ್ಯದ ಟಿಕೆಟ್ ಆಕಾಂಕ್ಷಿ ಕೆ ಕೆ ರಾಧಾಕೃಷ್ಣ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದು, ಒಂದು ವಾರ ಕ್ಷೇತ್ರದಾದ್ಯಂತ ಸಂಚರಿಸಿ ಮುಂದಿನ ನಡೆ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

ಇನ್ನು ಪಕ್ಷದಲ್ಲೇ ಇದ್ದೇನೆ, ಪಕ್ಷದ ಮುಖಂಡರು ಹಾಗೂ ಬೆಂಬಲಿಗರನ್ನು ಭೇಟಿ ಮಾಡುತ್ತೇನೆ. ಏಪ್ರಿಲ್ 13ರ ನಂತರ ನನ್ನ ಬೆಂಬಲಿಗರ ಸಭೆ ಕರೆದು ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.

ಮಂಡ್ಯದಿಂದ ಪಿ.ರವಿಕುಮಾರ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com