ಪ್ರಮುಖ ನಾಯಕರ ನಿರ್ಗಮನದಿಂದ ಕನಲಿದ ಕಮಲ: ಬಿಜೆಪಿಗೆ ತಪ್ಪುತ್ತಾ ಲಿಂಗಾಯತರ ಬೆಂಬಲ; 'ನಿಷ್ಠೆ' ಬದಲಿಸಿತೇ ಸಮುದಾಯ?

ಯಡಿಯೂರಪ್ಪನವರು ಏಕಾಂಗಿಯಾಗಿ ಹೋರಾಡಿ ಲಿಂಗಾಯತರ ವಿಶ್ವಾಸ ಮತ್ತು ಬೆಂಬಲ ಪಡೆದು ಅಧಿಕಾರಕ್ಕೇರಿದ್ದರು. ಆದರೆ ಲಿಂಗಾಯತ ಸಮುದಾಯ ವ್ಯಕ್ತಿಗಾಗಿ ಮತಹಾಕಿ ಬೆಂಬಲಿಸಿತ್ತೇ ಹೊರತು ಪಕ್ಷಕ್ಕಾಗಿ ಅಲ್ಲ. ಹೀಗಾಗಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಶೆಟ್ಟರ್, ಸವದಿ ಮತ್ತು ಎಂ.ಬಿ ಪಾಟೀಲ್
ಶೆಟ್ಟರ್, ಸವದಿ ಮತ್ತು ಎಂ.ಬಿ ಪಾಟೀಲ್

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಿರ್ಗಮನದಿಂದ ಬಿಜೆಪಿಯ ಲಿಂಗಾಯತ ಮತಬ್ಯಾಂಕ್ ವಿಭಜನೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಇತ್ತೀಚೆಗೆ ನಡೆದ ಈ ಬೆಳವಣಿಗೆಗಳಿಂದ ಕೇಂದ್ರ ನಾಯಕತ್ವವು ಅತೃಪ್ತಗೊಂಡಿದೆ ಎಂದು ಹೇಳಲಾಗುತ್ತಿದೆ.

ಸವದಿ ಮತ್ತು ಶೆಟ್ಟರ್ ನಿರ್ಗಮನದ ನಂತರದ ವಾತಾವರಣ ಬಿಜೆಪಿ ಪರವಾಗಿಲ್ಲ, ಬಿಜೆಪಿ ಹೈಕಮಾಂಡ್ ತಪ್ಪು ಲೆಕ್ಕಾಚಾರದ ಬಗ್ಗೆ ಸಂಪೂರ್ಣ ಅಸಮಾಧಾನಗೊಂಡಿದೆ ಎಂದು ತಿಳಿದು ಬಂದಿದೆ, ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಪಕ್ಷದ ಸೋಲಿಗೆ ಕಾರಣವಾಗಬಹುದು.

ಪಕ್ಷವು ಈಗ ಡ್ಯಾಮೇಜ್ ಕಂಟ್ರೋಲ್ ಮೇಲೆ ಕೆಲಸ ಮಾಡುತ್ತಿದೆ. ಲಿಂಗಾಯತ ಸಮುದಾಯದೊಂದಿಗೆ ಕಳೆದುಹೋದ ಕೆಲವು ಸ್ಥಾನವನ್ನು ಮರಳಿ ಪಡೆಯಲು ಮಾಜಿ ಸಿಎಂ ಮತ್ತು ಲಿಂಗಾಯತ ಪ್ರಬಲ ವ್ಯಕ್ತಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪನವರು  ಏಕಾಂಗಿಯಾಗಿ ಹೋರಾಡಿ ಲಿಂಗಾಯತರ ವಿಶ್ವಾಸ ಮತ್ತು ಬೆಂಬಲ ಪಡೆದು ಅಧಿಕಾರಕ್ಕೇರಿದ್ದರು. ಆದರೆ ಲಿಂಗಾಯತ ಸಮುದಾಯ ವ್ಯಕ್ತಿಗಾಗಿ ಮತಹಾಕಿ ಬೆಂಬಲಿಸಿತ್ತೇ ಹೊರತು ಪಕ್ಷಕ್ಕಾಗಿ ಅಲ್ಲ. ಹೀಗಾಗಿ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಏಕೆಂದರೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದಿಲ್ಲ, ಅಥವಾ ಅವರಿಗೆ ಯಾವುದೇ ಪ್ರಭಾವಿ ಸ್ಥಾನ ನೀಡುವುದಿಲ್ಲ ಎಂಬುದು ಸಮುದಾಯಕ್ಕೆ ಮನವರಿಕೆಯಾಗಿದೆ.

ಹೀಗಾಗಿ ಲಿಂಗಾಯತ ಸಮುದಾಯ ತಮ್ಮ ನಿಷ್ಠೆ ಬದಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ.  ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ತಮ್ಮ ಸಮುದಾಯದ ಪ್ರಮುಖ ನಾಯಕ ಎಂ.ಬಿ.ಪಾಟೀಲ್ ಸಿಎಂ ಅಥವಾ ಕನಿಷ್ಠ ಡಿಸಿಎಂ ಆಗುವ ಪ್ರಬಲ ಅವಕಾಶಗಳನ್ನು ಹೊಂದಿದ್ದಾರೆ, ಎಂದು ಪಕ್ಷದ ಒಳಗಿನವರು ಹೇಳತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೆ ತಾವೂ ಸಿಎಂ ಆಕಾಂಕ್ಷಿ ಎಂದು ಪಾಟೀಲ್ ಇತ್ತೀಚೆಗೆ ಘೋಷಿಸಿಕೊಂಡಿದ್ದರು.

ಕಳಂಕರಹಿತ ರಾಜಕೀಯ ಜೀವನದಲ್ಲಿ ಬಿಜೆಪಿ ನಾಯಕತ್ವದಿಂದ ತಮಗೆ ಆಗಿರುವ ಅವಮಾನದ ಬಗ್ಗೆ ಶೆಟ್ಟರ್  ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಗಳು ಬಿಜೆಪಿ ವಿರುದ್ಧ ಲಿಂಗಾಯತರ ಸಮುದಾಯದ ಸಿಡಿದೇಳಲು ಕಾರಣವಾಗಿದೆ. ಬಿಜೆಪಿ ತೊರೆಯುವ ಮುನ್ನ ಶೆಟ್ಟರ್ ಅಕ್ಷರಶಃ ಕಣ್ಣೀರಿಟ್ಟರು. ಪಕ್ಷ ತೊರೆಯಲು ಬಯಸಿರಲಿಲ್ಲ ಮತ್ತು ಟಿಕೆಟ್ಗಾಗಿ ಎಲ್ಲಾ ಸಂಭಾವ್ಯ ಬಾಗಿಲುಗಳನ್ನು ಬಡಿಯುವ ಮೂಲಕ ತುಂಬಾ ಪ್ರಯತ್ನ ಮಾಡಿದ್ದರು. ಭಾನುವಾರ ಮಧ್ಯರಾತ್ರಿಯವರೆಗೂ ಕಾಯುತ್ತಿದ್ದರು. ಮರುದಿನ ಬೆಳಿಗ್ಗೆ ಅವರು ಕಾಂಗ್ರೆಸ್ ಸೇರಿದರು.

ಅವರದ್ದು ಮೃದು ಮಾತು, ಸ್ನೇಹಪರ ವ್ಯಕ್ತಿತ್ವ, ಯಾವುದೇ ಕಾರಣಕ್ಕೂ ಅವರು ಬಿಜೆಪಿಯನ್ನು ತೊರೆಯಲು ಬಯಸಿರಲಿಲ್ಲ, ಆದರೆ ಪಕ್ಷದ ವರ್ತನೆಗೆ ಬೇಸತ್ತು ಪ್ರಬಲ ನಿರ್ಧಾರ ತೆಗೆದುಕೊಂಡರು. ಶೆಟ್ಟರ್ ಅವರ ‘ಅವಮಾನ’ವನ್ನು ಕಾಂಗ್ರೆಸ್ ತನ್ನ ಚುನಾವಣಾ ತಂತ್ರವಾಗಿ ಪರಿವರ್ತಿಸಿತು. ಶೆಟ್ಟರ್ ಗೆ ಮಾಡಿದ ಅವಮಾನ ಇಡೀ ‘ಲಿಂಗಾಯತರಿಗೆ ಮಾಡಿದ ಅವಮಾನ ಎಂದು ಕಥೆ ಹೇಳಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಆರು ಬಾರಿ ಶಾಸಕ, ಮಾಜಿ ಸಿಎಂ, ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಸ್ಪೀಕರ್ ಜಗದೀಶ್ ಶೆಟ್ಟರ್ ಏಪ್ರಿಲ್ 17 ರಂದು ಕಾಂಗ್ರೆಸ್ ಸೇರಿದರು.

ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ನ ಸವಣೂರು ಸ್ಪರ್ಧೆ

ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ತನ್ನ 7 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಶಿಗ್ಗಾಂವಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಹಮ್ಮದ್ ಯೂಸುಫ್ ಸವಣೂರ ಅವರನ್ನು ಕಣಕ್ಕಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com