ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೇ ವೇಳೆ ಪ್ರಮುಖ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಹಲವು ಉಚಿತ ಭಾಗ್ಯಗಳ ಘೋಷಣೆ ಮಾಡುತ್ತಿದ್ದಾರೆ.
‘ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೇ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಒದಗಿಸಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಕ್ಯಾಬಿನೆಟ್ ಸಭೆಯಲ್ಲಿಯೇ ತಮ್ಮ ನಾಲ್ಕು ಭರವಸೆಗಳನ್ನು ಈಡೇರಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂತಹ ಒಂದು ಯೋಜನೆಯನ್ನು ತಮಿಳು ನಾಡಿನಲ್ಲಿ ಜಾರಿಗೆ ತರಲಾಗಿದೆ, ಇದರಿಂದ ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಚುನಾವಣೆಗೂ ಮುನ್ನ ಘೋಷಿಸುತ್ತಿರುವ ಉಚಿತ ಭಾಗ್ಯಗಳ ಕುರಿತು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಸಂಬಂಧ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಅಧ್ಯಕ್ಷ ಮತ್ತು ಮಾಜಿ ಇನ್ಫೋಸಿಸ್ ನಿರ್ದೇಶಕ ಮೋಹನ್ದಾಸ್ ಪೈ ಟ್ವೀಟ್ ಮಾಡಿದ್ದು, ಉಚಿತ ಭಾಗ್ಯಗಳ ಘೋಷಣೆ ಅನುಷ್ಠಾನಕ್ಕೆ ಯಾರು ಹಣ ಪಾವತಿಸುತ್ತಾರೆ? ಅದನ್ನು ಕಾಂಗ್ರೆಸ್ ತಮ್ಮ ಬೊಕ್ಕಸದಿಂದ ಪಾವತಿಸಲಿದೆಯೇ ಅಥವಾ ರಾಹುಲ್ ಗಾಂಧಿ ಪಾವತಿಸಲಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಕೌಂಟರ್ ನೀಡಿರುವ ನೆಟ್ಟಿಗರೊಬ್ಬರು, ಪ್ರಧಾನಿಯವರ ಮನ್ ಕೀ ಬಾತ್ ಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
ವಿತ್ತ ಸಚಿವರಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವೆಚ್ಚವನ್ನು ಲೆಕ್ಕಿಸದೆ ನಾವು ಖಾತರಿ ನೀಡುತ್ತೇವೆಯೇ? ಎಂದು ಪ್ರಶ್ನಿಸಿದ್ದಾರೆ. ತಮ್ಮ ಪಕ್ಷ ಮೊದಲ ನಾಲ್ಕು ಗ್ಯಾರಂಟಿಗಳಿಗೆ ಸುಮಾರು 55,000 ರೂ. -56,000 ಕೋಟಿ ರೂ. ಹಣ ಬೇಕಾಗಿದೆ ಎಂದು ಹೇಳಿದ್ದಾರೆ.
ಉಚಿತ ಬಸ್ ಪ್ರಯಾಣದ ಭರವಸೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಮಹಿಳೆಯರಿಗೆ ಉಚಿತ ಬಸ್ ಪಾಸ್ ಅನ್ನು ಈಗಾಗಲೇ ನಮ್ಮ ಬಜೆಟ್ನಲ್ಲಿ ಘೋಷಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಾಂಗ್ರೆಸ್ಗೆ ಐಡಿಯಾಗಳು ಖಾಲಿಯಾಗುತ್ತಿವೆ. ರಾಹುಲ್ ಗಾಂಧಿಗೆ ಎಂದಿನಂತೆ ವಾಸ್ತವದ ಅರಿವಿಲ್ಲ. ಕಾಂಗ್ರೆಸ್ ಭರವಸೆಗಳನ್ನು ಜನರು ನಂಬುವುದಿಲ್ಲ ಎಂದು ಹೇಳಿದ್ದಾರೆ.
Advertisement