ಚಲುವರಾಯಸ್ವಾಮಿ ಮಾಟ ಮಂತ್ರ ಮಾಡಿಸ್ತಾನೆ; ಹಿಟ್ಟಿಕ್ಕಿದವಳನ್ನೇ ಇಟ್ಟುಕೊಳ್ಳೋರನ್ನು ಏನನ್ನೋದು? ಸುರೇಶ್ ಗೌಡ ವಾಗ್ದಾಳಿ

ಸಚಿವ ಚಲುವರಾಯಸ್ವಾಮಿ ಮಾಟ, ಮಂತ್ರ ಮಾಡಿಸುತ್ತಾನೆ. ಸತ್ಯವನ್ನು ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ಸಚಿವ ಚಲುವರಾಯಸ್ವಾಮಿ ಅದೃಷ್ಟ ಚೆನ್ನಾಗಿದೆ. ಚಲುವರಾಯಸ್ವಾಮಿ ಗೆದ್ದಾಗೆಲ್ಲ ದುಡ್ಡು ಮಾಡುತ್ತಾನೆ.
ಸುರೇಶ್ ಗೌಡ
ಸುರೇಶ್ ಗೌಡ
Updated on

ಮಂಡ್ಯ: ಸಚಿವ ಚಲುವರಾಯಸ್ವಾಮಿ ಮಾಟ, ಮಂತ್ರ ಮಾಡಿಸುತ್ತಾನೆ. ಸತ್ಯವನ್ನು ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ಸಚಿವ ಚಲುವರಾಯಸ್ವಾಮಿ ಅದೃಷ್ಟ ಚೆನ್ನಾಗಿದೆ. ಚಲುವರಾಯಸ್ವಾಮಿ ಗೆದ್ದಾಗೆಲ್ಲ ದುಡ್ಡು ಮಾಡುತ್ತಾನೆ. ನಾವು ಗೆದ್ದಾಗ ವಿರೋಧ ಪಕ್ಷದಲ್ಲಿ ಕೂತು ಬಾಯಿ ಬಡಿದುಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಚಲುವರಾಯಸ್ವಾಮಿ ಕಳೆದ 7-8 ತಿಂಗಳಿಂದ ಮಾತನಾಡುತ್ತಿಲ್ಲ. ಚಲುವರಾಯಸ್ವಾಮಿ ಪರ ಕ್ಯಾಂಪೇನ್‌ಗೂ ಬರಲಿಲ್ಲ. ಮುನಿಸಿಗೆ ಕಾರಣ ಏನೆಂದು ಚಲುವರಾಯಸ್ವಾಮಿ ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಫಾರೀನ್‌ಗೆ ಹೋಗುವ ಬಗ್ಗೆ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪಿಟ್ ಆಡೋಕೆ ಹೋಗಿದ್ರಾ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೇ ನಾವು ಸುಮ್ಮನಿರಲ್ಲ. ಪುಟ್ಟೇಗೌಡರಿಗೆ ಈತ ಬೀಡಿ, ಸಿಗರೇಟ್ ತಂದು ಕೊಡುತ್ತಿದ್ದು ಸುಳ್ಳಾ? ಶಿವರಾಮೇಗೌಡ ಬಳಿ ಐದು ಸಾವಿರ ರೂ. ಹಣಕ್ಕೆ ಬಂದಿದ್ದು ಸುಳ್ಳಾ? ಚಲುವರಾಯಸ್ವಾಮಿಯನ್ನು ಜಿಲ್ಲಾ ಪಂಚಾಯತ್​ ಉಪಾಧ್ಯಕ್ಷ ಮಾಡಿದ್ದು ಜೆಡಿಎಸ್​​. ಶಾಸಕ, ಸಚಿವ, ಎಂಪಿಯನ್ನಾಗಿ ಮಾಡಿದ್ದು ಜೆಡಿಎಸ್‌ ಪಕ್ಷ. ಚಲುವರಾಯಸ್ವಾಮಿಗೆ ನಿಯತ್ತು ಇಲ್ಲ. ಹಿಟ್ಟಿಕ್ಕಿದವಳನ್ನೇ ಇಟ್ಟು ಕೊಳ್ಳುವವರನ್ನು ಏನು ಅಂತ ಕರಿಯೋದು? ಎಂದು ವಾಗ್ದಾಳಿ ಮಾಡಿದರು.

ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಅಧಿಕಾರ ಸಿಕ್ಕಾಗ ಜನಗಳಿಗೆ ಒಳ್ಳೆಯದು ಮಾಡಬೇಕು. ಅಧಿಕಾರಿಗಳ ವರ್ಗಾವಣೆಯಲ್ಲಿ 150 ಕೋಟಿ ರೂ., ಜಲಧಾರೆ ಯೋಜನೆ 100 ಕೋಟಿ ರೂ., ಅಧಿಕಾರಿಗಳ ಬಳಿ ಲೂಟಿ ಹೀಗೆ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬನೇ ಲೂಟಿ ಹೊಡೆದಿದ್ದಾನೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರ ಜೆಸಿಬಿಯಲ್ಲಿ ಹಣ ತುಂಬುತ್ತಿದೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ಇವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲಾಕ್‌ ಮನಿ ವೈಟ್ ಮಾಡಿದ್ದಾನೆ.? ಅದೆಲ್ಲವೂ ಆಚೆ ಬರುತ್ತದೆ, ಈಡಿ ಕಣ್ಣು ಬಿಡಲಿದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬಂಕ್​ ಮಾಲೀಕರ ಹತ್ತಿರ ಎಷ್ಟು ಕಲೆಕ್ಷನ್ ಮಾಡುತ್ತಿದ್ದಾನೆ ?ಎಲ್ಲವೂ ಜನರಿಗೆ ಗೊತ್ತಿದೆ ಎಂದರು.

ತಿಂದವನು ಕಕ್ಕಲೇ ಬೇಕು, ಎಲ್ಲ ಮುಂದೆ ಗೊತ್ತಾಗುತ್ತೆ. ಅಧಿಕಾರಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿ‌ನ 37 ಕ್ರೆಸೆಂಟ್ ಹೋಟೆಲ್‌ಗೆ ಅಧಿಕಾರಿಗಳನ್ನು ಕರೆಸಿಕೊಂಡು ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಗಳು ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರೆಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ದರು ತಿಳಿಯುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com