ಕಾಂಗ್ರೆಸ್ ನಲ್ಲಿ 'ಆಪರೇಷನ್ ಹಸ್ತ' ಗುಸುಗುಸು: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದ ಡಿ ಕೆ ಶಿವಕುಮಾರ್

ಆಪರೇಷನ್ ಹಸ್ತ, ಕಾಂಗ್ರೆಸ್ ತೊರೆದು ಹೋಗಿದ್ದ ನಾಯಕರು, ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡುವ ವಿಚಾರ ನನಗೆ ಗೊತ್ತಿಲ್ಲ, ನಿಮ್ಮ ಮೂಲಕ ಮಾಧ್ಯಮಗಳಲ್ಲಿ ಇದನ್ನು ನೋಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಆಪರೇಷನ್ ಹಸ್ತ, ಕಾಂಗ್ರೆಸ್ ತೊರೆದು ಹೋಗಿದ್ದ ನಾಯಕರು, ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡುವ ವಿಚಾರ ನನಗೆ ಗೊತ್ತಿಲ್ಲ, ನಿಮ್ಮ ಮೂಲಕ ಮಾಧ್ಯಮಗಳಲ್ಲಿ ಇದನ್ನು ನೋಡುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಲೋಕಸಭೆ ಚುನಾವಣೆ ಪೂರ್ವ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಡಿ ಕೆ ಶಿವಕುಮಾರ್ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ನನ್ನ ಜೊತೆ ಯಾರೂ ಮಾತನಾಡಿಲ್ಲ, ನಾನು ಯಾರಿಗೂ ಟಾಸ್ಕ್ ಕೊಟ್ಟಿಲ್ಲ. ಆದರೆ ಎಲ್ಲರೂ ನನಗೆ ಪರಿಚಯಸ್ಥರು, ರಾಜ್ಯದ 224 ಶಾಸಕರು ಕೂಡ ನನಗೆ ಪರಿಚಯಸ್ಥರು ಎಂದರು.

ಎಲ್ಲರ ಜೊತೆಗೂ ರಾಜಕೀಯವಾದ ಸಂಬಂಧ ಇಲ್ಲದೇ ಹೋದರೂ ವೈಯಕ್ತಿಕವಾದ ಸಂಬಂಧಗಳನ್ನು ಬೆಳೆಸಿಕೊಂಡಿರುತ್ತೇವೆ. ಅವರು ನಮ್ಮ ಜೊತೆ ಪರಿಚಯ, ಸಂಬಂಧ ಬೆಳೆಸಿಕೊಂಡಿರುತ್ತಾರೆ, ಅವರ ಹೆಸರಿಗೆ ನಾನೇಕೆ ಧಕ್ಕೆ ತರಲಿ ಎಂದು ಕೇಳಿದರು.

ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ: 2019ರಲ್ಲಿ ಪಕ್ಷ ತೊರೆದು ಹೋದವರು ಮತ್ತೆ ಬಂದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆಯೇ ಎಂದು ಕೇಳಿದಾಗ, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. 

ಬಿಜೆಪಿ ಏನು ಮಾಡುತ್ತಿದೆ ಮತ್ತು ಯಾರೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬುದು ನನಗೆ ತಿಳಿದಿದೆ. ಆ ನಿಟ್ಟಿನಲ್ಲಿ ಮಾಧ್ಯಮಗಳು ಮೌನವಾಗಿವೆ. ನಮ್ಮ ಸರ್ಕಾರ ಅಸ್ತಿತ್ವದಲ್ಲಿದೆ. ಬಿಜೆಪಿಯವರು ಕಷ್ಟಪಟ್ಟು ಕಲಿತ ಪಾಠಗಳು ಇನ್ನೂ ನೆನಪಿನಲ್ಲಿ ಉಳಿದಿವೆ. ನಾವು 136 ಸದಸ್ಯರಿದ್ದು, ಇಬ್ಬರು ಸ್ವತಂತ್ರರೂ ನಮ್ಮೊಂದಿಗಿದ್ದಾರೆ. ಉತ್ತಮ ಆಡಳಿತ ನೀಡುವುದು ಮತ್ತು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಮ್ಮ ಗಮನವಾಗಿದೆ ಎಂದು ಕೂಡ ಶಿವಕುಮಾರ್ ಹೇಳಿದ್ದಾರೆ. 

ಹಿಂದಿನ ಸರ್ಕಾರವನ್ನು ಜನ ದೂರವಿಟ್ಟಿದ್ದಾರೆ. ಈಗ ಬಿಜೆಪಿ, ಜೆಡಿಎಸ್ ನಾಯಕರು ನೆಮ್ಮದಿ ಕಳೆದುಕೊಂಡಿದ್ದಾರೆ, ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಿದ್ದೇವೆ, ಗೆದ್ದವರು, ಸೋತವರು ಹೇಳಿಕೆ ನೀಡುತ್ತಿದ್ದು, ಮಾಧ್ಯಮಗಳು ಹೈಲೈಟ್ ಮಾಡಿ ಬೆಂಬಲಿಸುತ್ತಿವೆ. ಅವರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು. 

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ವೋಟ್ ಶೇರ್ ಹೆಚ್ಚಿಸಿಕೊಳ್ಳಲು ಕೆಲಸ ಮಾಡುವಂತೆ ಸೂಚಿಸಿದ್ದೇವೆ. ಸ್ಥಳೀಯ ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವುದು ಸಹ ಆಗಿರಬಹುದು ಎಂದರು. 

ರಾಜ್ಯ ರಾಜಕಾರಣದಲ್ಲಿ ಬಾಂಬೆ ಬಾಯ್ಸ್ ಘರ್‌ವಾಪ್ಸಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆಪರೇಷನ್‌ಗೆ ಕಾಂಗ್ರೆಸ್ ಕೈ ಹಾಕಿದೆ ಎನ್ನುವ ವ ಹೊತ್ತಲ್ಲೇ ಯಶವಂತಪುರದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಎಸ್‌.ಟಿ ಸೋಮಶೇಖರ್ ನಡೆಸಿದ್ದ ಸಭೆಯಲ್ಲಿ ನೆಲಮಂಗಲ ಕೈ ಶಾಸಕ ಶ್ರೀನಿವಾಸ್ ಭಾಗಿಯಾಗಿ ಡಿಕೆ ಟಾಸ್ಕ್ ನೀಡಿದ್ದಾರೆ ಎಂದು ಹೇಳಿದ್ದಾರೆ. 

ಸೋಮಶೇಖರ್​ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ಬಗ್ಗೆ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ, ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, 10 ರಿಂದ 15 ಹಾಲಿ, ಮಾಜಿ ಶಾಸಕರು ಕಾಂಗ್ರೆಸ್​ ಸೇರಲು ಸಿದ್ಧರಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com