ಸಂಸದ ಪ್ರತಾಪ್ ಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷದ್ದಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಸಂಸದ ಪ್ರತಾಪ ಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್‌‍ ಪಕ್ಷದ್ದಲ್ಲ. ಪ್ರತಾಪ ಸಿಂಹ ಮೈಸೂರಿನ ಗೌರವಾನ್ವಿತ ಸಂಸದ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಅವರು ಭಾನುವಾರ ಹೇಳಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಮೈಸೂರು: ಸಂಸದ ಪ್ರತಾಪ ಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್‌‍ ಪಕ್ಷದ್ದಲ್ಲ. ಪ್ರತಾಪ ಸಿಂಹ ಮೈಸೂರಿನ ಗೌರವಾನ್ವಿತ ಸಂಸದ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಅವರು ಭಾನುವಾರ ಹೇಳಿದರು.

ಕಾಂಗ್ರೆಸ್‌‍ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ ಸಿಂಹ ಪ್ರಚೋದಿಸುತ್ತಾರೆ ಎಂದು ಟೀಕಿಸುತ್ತೇವೇ ಹೊರತು ಭಯೋತ್ಪಾದಕ ಎಂದು ಹೇಳಿಲ್ಲ. ಇತ್ತೀಚೆಗೆ ರಾಮಸ್ವಾಮಿ ವೃತ್ತದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ಅವರ ಕೈಯಲ್ಲಿ ಬಾಂಬ್‌ ಇಟ್ಟಿಕೊಂಡಿರುವಂತೆ ಚಿತ್ರಿಸಿ, ದೇಶದ್ರೋಹಿ, ಭಯೋತ್ಪಾದಕ ಎಂದೆಲ್ಲಾ ಬರೆಯಲಾಗಿತ್ತು.

ಪ್ರತಿಭಟನೆ ನಡೆಸಿದ ವೇದಿಕೆಯ ಕೆ.ಎಸ್‌. ಶಿವರಾಮ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆ ಹಿಂದೆ, ಮುಂದೆ ನಿಂತಿರುತ್ತಾರೆ. ಅವರು ಕಾಂಗ್ರೆಸ್‌‍ ಪಕ್ಷದ ಸದಸ್ಯರೂ ಅಲ್ಲ. ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ತಿಳಿಸಿದರು.

ಹತಾಶರಾದ ಯುವಕರು: ದೇಶದ ಯುವಕರು ಉದ್ಯೋಗವಿಲ್ಲದೇ ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ವಾರ್ಷಿಕ 2 ಕೋಟಿ ಉದ್ಯೋಗವಲ್ಲ, 10 ವರ್ಷಗಳ ಆಡಳಿತದಲ್ಲಿ 2 ಕೋಟಿ ಉದ್ಯೋಗವನ್ನು ಸೃಷ್ಟಿಸಲಿಲ್ಲ. ಇಂಜಿನಿಯರಿಂಗ್‌ ಮುಗಿಸಿದವರು ನರೇಗಾದಂತಹ ಕೂಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಇದೇ ವೇಳೆ ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ಮೇಲೆ ನಡೆದ ಘಟನೆ ಖಂಡಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದನ್ನು ಟೀಕಿಸಿದ ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

ದೇಶದಲ್ಲಿ ಪ್ರತಿನಿತ್ಯ 89 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಯ ಪ್ರಕಾರ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಮಣಿಪುರದ ಬೆತ್ತಲೆ ಮೆರವಣಿಗೆ ಬಗ್ಗೆ ಬಿಜೆಪಿಯವರು ಮೌನವಾಗಿದ್ದು, ಈಗ ಹೋರಾಟ ಮಾಡುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.

ಬಳಿಕ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಘಟನೆಯ ಬಗ್ಗೆ ಸಿಂಗ್ ಅವರು ನೀಡಿರುವ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಹೇಳಿಕೆ ನೀಡಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕ ಸಿಟಿ ರವಿ ಕೂಡ ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರನ್ನು ಮರುನಾಮಕರಣ ಮಾಡಬೇಕೆಂಬ ಕಾಂಗ್ರೆಸ್ ಶಾಸಕರ ಪ್ರಸ್ತಾವನೆ ಪ್ರತಿಕ್ರಿಯಿಸಿ, ಇದು ಹೊಸ ಪ್ರಸ್ತಾಪವಲ್ಲ, ಈ ಹಿಂದೆ ಸಿದ್ದರಾಮಯ್ಯ ಅವರು 2015 ರಲ್ಲಿ ಸಚಿವ ಸಂಪುಟದ ಮುಂದೆಯೂ ಈ ಪ್ರಸ್ತಾವನೆಯನ್ನು ಇರಿಸಿದ್ದರು. ಆದರೆ, ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com