ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್, ಕೋಲಾರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ.
ಕೋಲಾರ ವಿಧಾನಸಭಾ ಕ್ಷೇತ್ರದ ಒಕ್ಕಲಿಗ ಮುಖಂಡರು ಹಾಗೂ ಸಮಾಜದ ಪ್ರಮುಖರಿಗೆ ಮಾಂಸಾಹಾರಿ ಊಟ ಹಾಕುವ ಮೂಲಕ ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.
ಒಕ್ಕಲಿಗ ಮುಖಂಡರಿಗೆ ಇದು ಮೊದಲ ಸಭೆಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಕೆ ಶ್ರೀನಿವಾಸಗೌಡ, ಕೆ ವೈ ನಂಜೇಗೌಡ, ಎಂಎಲ್ಸಿ ಅನಿಲ್ಕುಮಾರ್, ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್ ಮತದಾರರಲ್ಲಿ ಮನವಿ ಮಾಡಿಕೊಂಡರು.
ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ವೆಮಗಲ್ ಹೊರವಲಯದಲ್ಲಿ ಸಭೆ ನಡೆಸಲಾಯಿತು. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಸಭೆ ಇದಾಗಿದೆ.
ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಅನ್ನು ವಿಶೇಷವಾಗಿ ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಕುಟುಂಬದ ಹಿತಾಸಕ್ತಿಗಳನ್ನು ಪ್ರಚಾರ ಮಾಡಲು ಜೆಡಿಎಸ್ ಉತ್ಸುಕವಾಗಿದೆಯೇ ಹೊರತು ಒಕ್ಕಲಿಗರ ಪರವಾಗಿಲ್ಲ ಎಂದು ಹೇಳಿದರು.
ಮಂಡ್ಯ ಚುನಾವಣೆಗೆ ಒಕ್ಕಲಿಗ ನಾಯಕನನ್ನು ಆಯ್ಕೆ ಮಾಡುವ ಬದಲು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಪಕ್ಷ ಕಣಕ್ಕಿಳಿಸಿದೆ ಎಂದು ತಿಳಿಸಿದರು.
ಜೆಡಿಎಸ್'ನಲ್ಲಿ ಟಿಕೆಟ್ ಪಡೆದು ಗೆಲುವು ಸಾಧಿಸಿ, ಕಾಂಗ್ರೆಸ್ ಸೇರಿರುವ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಅವರನ್ನು ಕಡೆಗಣಿಸಲಾಗುತ್ತಿದೆ, ಪಕ್ಷಕ್ಕೆ ಅವರ ಕೊಡುಗೆ ಮಹತ್ವದ್ದಾಗಿದ್ದು, ಅವರ ಹಿರಿತನ ಮರೆತು ಇದೆ ನಡೆಸಿಕೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿ, ಇದರಿಂದ ಇಡೀ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ಮನವಿ ಮಾಡಿಕೊಂಡರು.
Advertisement
Advertisement