ಉದ್ಯಮಿ ಅದಾನಿಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ ಉತ್ತರಿಸಿ: ಪ್ರಧಾನಿ ಮೋದಿಗೆ ಆಪ್ ಸವಾಲು

ಉದ್ಯಮಿ ಗೌತಮ್ ಅದಾನಿಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಮ್ ಆದ್ಮಿ ಪಕ್ಷ ಸೋಮವಾರ ಸವಾಲು ಹಾಕಿದೆ.
ಬ್ರಿಜೇಶ್‌ ಕಾಳಪ್ಪ
ಬ್ರಿಜೇಶ್‌ ಕಾಳಪ್ಪ
Updated on

ಬೆಂಗಳೂರು: ಉದ್ಯಮಿ ಗೌತಮ್ ಅದಾನಿಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಮ್ ಆದ್ಮಿ ಪಕ್ಷ ಸೋಮವಾರ ಸವಾಲು ಹಾಕಿದೆ.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಅವರು, ಕೇಂದ್ರ ಬಜೆಟ್ ಅನ್ನು ವಿವರಿಸಲು ಪ್ರಧಾನಿ ಮೋದಿ ಅವರು ಗ್ಲೋಕಲ್ ಮತ್ತು ಅಮೃತ್ ಕಾಲ್ ಎಂಬ ಹೊಸ ಪದಗಳನ್ನು ಬಳಸಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು. ಅಲ್ಲದೆ, ಉದ್ಯಮಿ ಗೌತಮ್ ಅದಾನಿಗೆ ಸಂಬಂಧಿಸಿದ 5 ಪ್ರಶ್ನೆಗಳಿಗೆ ಉತ್ತರಿಸುವಂತೆ ಮೋದಿಯವರಿಗೆ ಸವಾಲು ಹಾಕಿದರು.

ಪ್ರಧಾನಿ ನರೇಂದ್ರ ಮೋದಿಯ ಗ್ಲೋಕಲ್‌ ಎಂಬ ವಿಚಾರವನ್ನು ಕೈಗೆತ್ತಿಕೊಂಡು ಘೋಷಣೆ ಮಾಡುತ್ತಿದ್ದಾರೆ. ಗ್ಲೋಬಲ್‌ ಹಾಗೂ ಲೋಕಲ್‌ ವಿಚಾರದಲ್ಲಿ ನಾವು ಹೇಗಿರಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಂದು ಶಬ್ದವನ್ನು ತೆಗೆದುಕೊಂಡು, ಅದನ್ನು ಇನ್ನೊಂದು ಶಬ್ದದೊಂದಿಗೆ ಜೋಡಿಸಿ ಹೊಸ ಶಬ್ದ ನಿರ್ಮಾಣ ಮಾಡಿ, ಜನರನ್ನು ಗೊಂದಲಗೊಳಿಸುವಂತೆ ಘೋಷಣೆ ಮಾಡುತ್ತಿರುತ್ತಾರೆ. ಇದರಿಂದ ಎಂಟು ವರ್ಷಗಳ ಕಾಲಾವಧಿಯಲ್ಲಿ ಜನರಿಗೆ ಹೇಗೆ ಸಹಾಯವಾಗಿದೆ ಎನ್ನುವುದು ಮುಖ್ಯವಾದ ವಿಚಾರ ಎಂದು ಹೇಳಿದರು.

ಈಗ ಗ್ಲೋಕಲ್‌, ಅಮೃತ್‌ ಕಾಲ್‌ ಬಜೆಟ್‌ ಮುಂತಾದ ಶಬ್ದಗಳನ್ನು ಬಳಸುತ್ತಿದ್ದಾರೆ. ಕೇವಲ ಶಬ್ದಗಳಲ್ಲಿ ಆಟವಾಡುವ ಬದಲು, ಇವುಗಳ ಅರ್ಥ ಏನೆಂದು ಜನರಿಗೆ ವಿವರವಾಗಿ ತಿಳಿಸಲಿ. ಇದರಿಂದ ಜನರಿಗೆ ಹೇಗೆ ಅನುಕೂಲವಾಗುತ್ತದೆ? ಜನರ ಜೀವನ ಹೇಗೆ ಸುಗಮವಾಗುತ್ತದೆ? ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿ ಈ ವರ್ಷದಲ್ಲೇ ಮೂರನೇ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ರಸ್ತೆ ಗುಂಡಿಗಳಿಂದ ಐವತ್ತು ಜನ ಮೃತಪಟ್ಟಿರುವಾಗ ಬನ್ನಿ ಎಂದು ಕರೆದಾಗ ಮೋದಿ ಬರಲಿಲ್ಲ. ಕಾವೇರಿ, ಮೇಕೆದಾಟು ವಿಚಾರದಲ್ಲಿ ಕುಡಿಯಲು ನೀರಿಲ್ಲ ಎಂದಾಗಲೂ ಬರಲಿಲ್ಲ. ಕೃಷ್ಣಾ ನದಿ ವಿಚಾರದಲ್ಲಿ ಅಂತಿಮ ನೋಟಿಫಿಕೇಷನ್‌ ಮಾಡಿ ಎಂದು ಕೇಳಿದಾಗಲೂ ಬರಲಿಲ್ಲ. ಮಹದಾಯಿ ವಿಚಾರಕ್ಕೂ ಬರಲಿಲ್ಲ, ಬೆಳಗಾವಿ ವಿಚಾರದಲ್ಲಿ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಸಂಭವಿಸಿದಾಗಲೂ ಬರಲಿಲ್ಲ. ಬಿಜೆಪಿಯ 26 ಸಂಸದರು ಕೂಡ ಬರಲಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಮೋದಿ ಹಾಜರಿರುತ್ತಾರೆ. ಆದ್ದರಿಂದ ನಾವು ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ಪ್ರಧಾನಿ ಉತ್ತರ ನೀಡಲಿ. ಇಲ್ಲದಿದ್ದರೆ ಇದು ಗ್ಲೋಕಲ್‌ ಅಲ್ಲ, ಕರ್ನಾಟಕ ಜನತೆ ಗೋತಾ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದರು.

ಬಳಿಕ ಅದಾನಿಗೆ ಸಂಬಂಧಿಸಿದ ಐದು ಪ್ರಶ್ನೆಗಳನ್ನು ಪ್ರಧಾನಿಗೆ ಮುಂದಿಟ್ಟ ಅವರು, 2015ರ ಮೇ ತಿಂಗಳಿನಲ್ಲಿ ತಾವು ಗೌತಮ್‌ ಅದಾನಿ ಜೊತೆ ಚೀನಾಗೆ ಹೋಗಿದ್ದ ವೇಳೆ ನಡೆದ 26 ಒಪ್ಪಂದಗಳಲ್ಲಿ 22 ಬಿಲಿಯನ್‌ ಡಾಲರ್‌ ಮೊತ್ತದ ಸಿಂಹಪಾಲು ಅದಾನಿಯವರಿಗೆ ಬಂದಿದೆಯೋ ಇಲ್ಲವೋ? ಮೋದಿಯವರು 2014 ಹಾಗೂ 2019ರ ಚುನಾವಣೆಯಲ್ಲಿ ಹೆಚ್ಚಾಗಿ ಓಡಾಡಿದ್ದು, ಅದಾನಿಯವರ ಏರ್‌ಕ್ರಾಫ್ಟ್‌ಗಳಲ್ಲಿ ಹೌದೋ ಅಲ್ಲವೋ? ಆಸ್ಟ್ರೇಲಿಯಾ ಪ್ರಧಾನಿ ಜೊತೆ ಕಾರ್ಮೈಕಲ್‌ ಮೈನಿಂಗ್‌ ಕಂಪನಿಗೆ ಲಾಭ ಮಾಡಿಕೊಡಲು ಪ್ರಧಾನಿ ಮೋದಿ ಮಾತನಾಡಿದ್ದು ಸತ್ಯವೋ ಸುಳ್ಳೋ? ಮಂಗೋಲಿಯಾಗೆ 2020ರಲ್ಲಿ ಮೋದಿಯವರು ಹೋದಾಗ ಅಲ್ಲಿನ ಪ್ರಧಾನಿಗೆ ಅದಾನಿಯನ್ನು ಮೋದಿ ಪರಿಚಯ ಮಾಡಿಸಿಕೊಟ್ಟಿದ್ದು ನಿಜವೋ ಸುಳ್ಳೋ? ಯಾವುದಾದರೂ ಒಂದು ಭಾರತೀಯ ಕಂಪನಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂದರ್ಭದಲ್ಲಿ ಆ ದೇಶದಿಂದಲೇ ಸಹಾಯ ಪಡೆಯುತ್ತದೆಯೇ ಹೊರತು ನಮ್ಮ ದೇಶದಿಂದ ಪಡೆಯುವುದಿಲ್ಲ. ಆದರೆ ಕಾರ್ಮೈಕಲ್‌ ಪ್ರಾಜೆಕ್ಟ್‌ಗೆ ಅದಾನಿ ಎಸ್‌ಬಿಐನಿಂದ 10,000 ಕೋಟಿ ರೂ. ಸಹಾಯಧನ ಪಡೆದಿದ್ದು ನಿಜವೋ ಸುಳ್ಳೋ? ಅಲ್ಲಿನ ಲೋಕಲ್‌ ಬ್ಯಾಂಕ್‌ಗಳು ಏಕೆ ಸಹಾಯ ಮಾಡಿಲ್ಲ ಎಂಬ ವಿಚಾರ ಕೂಡ ಕಾಡುತ್ತಿದೆ. ಈ ಐದು ಪ್ರಶ್ನೆಗಳನ್ನು ಬೆಂಗಳೂರಿಗೆ ಬಂದಿರುವ ಪ್ರಧಾನಿಗೆ ಕೇಳಲು ಬಯಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲಿಯೂ ಆಮ್ ಆದ್ಮಿ ಪಕ್ಷ ಸ್ಪರ್ಧೆಗಿಳಿಯಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com