ಗದಗ: ಕಳೆದ 20 ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದ ಸಿದ್ದರಾಮಯ್ಯನವರನ್ನು 2018ರಲ್ಲಿ ಜನರು ಮನೆಗೆ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ನಿನ್ನೆ ಲಕ್ಕುಂಡಿಯಲ್ಲಿ ನಡೆದ ಲಕ್ಕುಂಡಿ ಉತ್ಸವ ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಇಷ್ಟು ವರ್ಷ ಕಾಂಗ್ರೆಸ್ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಯತ್ನಿಸಿದೆ. ಸಿದ್ದರಾಮಯ್ಯನವರ ಹಿಂದುತ್ವದ ಟೀಕೆಗಳ ಬಗ್ಗೆ ಕೇಳಿದಾಗ, ಇದು ಹೊಸ ವ್ಯಾಖ್ಯಾನವಾಗಿರಬಹುದು. ನೀವು ಅದರ ಬಗ್ಗೆ ಪ್ರತಿಪಕ್ಷ ನಾಯಕರ ಬಳಿ ಕೇಳಬೇಕು ಎಂದರು.
ರಾಜ್ಯಪಾಲರ ಭಾಷಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸಿದ್ದರಾಮಯ್ಯ ಅವರು ಚುನಾವಣೆಗೆ ಮುನ್ನ 15 ಲಕ್ಷ ಕುಟುಂಬಗಳಿಗೆ 3,000 ಕೋಟಿ ನೀಡುವುದಾಗಿ ಘೋಷಿಸಿದರು, ಇದಕ್ಕಾಗಿ ಅವರು 15,000 ಕೋಟಿ ರೂಪಾಯಿ ಮೀಸಲಿಡಬೇಕು, ಅವರ ಎಲ್ಲಾ ಘೋಷಣೆಗಳು ಸುಳ್ಳು, ಕೇವಲ ರಾಜಕೀಯ ಕಾರಣಗಳಿಗೆ ಮಾತ್ರ ಅದನ್ನು ಹೇಳುತ್ತಾರೆ ಎಂದರು.
ನವಲೆ ಅಣೆಕಟ್ಟು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ನವಲೆ ಅಣೆಕಟ್ಟಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಆಂಧ್ರಪ್ರದೇಶದ ಅಧಿಕಾರಿಗಳು ಬೆಂಗಳೂರಿಗೆ ಭೇಟಿ ನೀಡಿದ್ದು, ಈ ಕುರಿತು ಚರ್ಚಿಸಿದ್ದಾರೆ ಎಂದರು.
ತಡಿಯೋ ಮಾರಾಯ: ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಯುವಕನೊಬ್ಬ ಬಂದು ಮುಖ್ಯಮಂತ್ರಿಗಳ ಮುಂದೆ ಪತ್ರ ಇಟ್ಟಾಗ ವಿಚಲಿತರಾದ ಮುಖ್ಯಮಂತ್ರಿಗಳು ತಡಿಯೋ ಮಾರಾಯ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಯುವಕರಿಗೆ ಹೇಳಿ, ಒಂದು ನಿಮಿಷ ನಾನಿಲ್ಲಿ ಮಾತನಾಡುತ್ತಿದ್ದೇನೆ, ದಿಕ್ಕು ತಪ್ಪಿಸುತ್ತಿದ್ದೀರಿ ಎಂದು ಹೇಳಿ ನಕ್ಕರು.
ಲಕ್ಕುಂಡಿ ಉತ್ಸವವು ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಮತ್ತು ಜಾನಪದ ಗೀತೆಗಳಿಗೆ ಸಾಕ್ಷಿಯಾಯಿತು. ಇಂದು ಗದಗ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಕಲಾವಿದರಿಂದ ಕೆಲವು ಸಂಗೀತ ಕಾರ್ಯಕ್ರಮಗಳೊಂದಿಗೆ ಕುಸ್ತಿ ಸ್ಪರ್ಧೆಗಳು, ಕಬ್ಬಡ್ಡಿ ಸ್ಪರ್ಧೆ ಮತ್ತು ಇತರ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಇಂದಿನ ಲಕ್ಕುಂಡಿ ಉತ್ಸವ: ನಿನ್ನೆಯ ಲಕ್ಕುಂಡಿ ಉತ್ಸವದಲ್ಲಿ ಸುಗಮ ಸಂಗೀತ, ಡೊಳ್ಳಿನ ಪದ, ವಚನ ಸಂಗೀತ, ಜಾನಪದ ಗೀತೆಗಳು, ಲಕ್ಕುಂಡಿ ಶಾಲಾ ಮಕ್ಕಳಿಂದ ಸಾಮೂಹಿಕ ನೃತ್ಯ, ಅತ್ತಿಮಬ್ಬೆ ನಾಟಕ, ಮಿಮಿಕ್ರಿ ಗೋಪಿ ಮತ್ತು ಕಾರ್ತಿಕ್ ಪತ್ತಾರರಿಂದ ಹಾಸ್ಯ ಕಾರ್ಯಕ್ರಮಗಳು ಜರುಗಿದವು.
Advertisement