ಪಕ್ಷದ ನೋಟಿಸ್ ಗೆ ಹೆದರಲ್ಲ; ಚುನಾವಣೆ ಸೋಲಿನ ಕುರಿತು ಪ್ರಧಾನಿ ಮೋದಿ, ವರಿಷ್ಠರಿಗೆ ಪತ್ರ ಬರೆಯುತ್ತೇನೆ: ಎಂ.ಪಿ. ರೇಣುಕಾಚಾರ್ಯ

ಪಕ್ಷ ವಿರೋಧಿ ಹೇಳಿಕೆಗಾಗಿ ನೋಟಿಸ್ ಪಡೆದಿರುವ ಬಿಜೆಪಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ಸ್ವಪಕ್ಷೀಯರ ವಿರುದ್ಧ ಗುಡುಗಿದ್ದಾರೆ. ಪಕ್ಷದ ನೋಟಿಸ್ ಗೆ ಹೆದರಲ್ಲ, ಚುನಾವಣೆಯಲ್ಲಿ ಸೋತಿದ್ದು ಮತ್ತು ಅದಕ್ಕೆ ಯಾರು ಜವಾಬ್ದಾರರು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವರಿಷ್ಠರಿಗೆ ಪತ್ರ ಬರೆಯುತ್ತೇನೆ ಎಂದರು. 
ಎಂಪಿ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
Updated on

ಬೆಂಗಳೂರು: ಪಕ್ಷ ವಿರೋಧಿ ಹೇಳಿಕೆಗಾಗಿ ನೋಟಿಸ್ ಪಡೆದಿರುವ ಬಿಜೆಪಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ಸ್ವಪಕ್ಷೀಯರ ವಿರುದ್ಧ ಗುಡುಗಿದ್ದಾರೆ. ಪಕ್ಷದ ನೋಟಿಸ್ ಗೆ ಹೆದರಲ್ಲ, ಚುನಾವಣೆಯಲ್ಲಿ ಸೋತಿದ್ದು ಮತ್ತು ಅದಕ್ಕೆ ಯಾರು ಜವಾಬ್ದಾರರು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ವರಿಷ್ಠರಿಗೆ ಪತ್ರ ಬರೆಯುತ್ತೇನೆ ಎಂದರು. 

ಶನಿವಾರ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ಅವರ ಸೂಚನೆಗಳಿಗೆ ಬದ್ಧನಾಗಿದ್ದು,  ಮಾಧ್ಯಮಗಳ ಮುಂದೆ ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದರು.

ನಿನ್ನೆ ಬಿಜೆಪಿ ನಾಯಕರ ಸಭೆಯಲ್ಲಿ ಪಕ್ಷಕ್ಕೆ ಮುಜುಗರ ತರುವಂತೆ ಹೇಳಿಕೆ ನೀಡುವವರನ್ನು ಕರೆದು ಮಾತನಾಡುವ ಜವಾಬ್ದಾರಿಯನ್ನು ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡುವ ನಿರ್ಣಯವನ್ನು ಕೈಗೊಂಡಿತ್ತು. ಆದರೆ, ಈ ಸಭೆಗೆ ಗೈರಾಗಿದ್ದ ಎಂ.ಪಿ. ರೇಣುಕಾಚಾರ್ಯ ಇಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಹೊತ್ತು ಮಾತುಕತೆ ನಡೆಸಿದರು.

ನನಗೆ ನೋಟಿಸ್ ನೀಡಿದ ನಂತರ ಶಿಸ್ತು ಸಮಿತಿಯ ಅಸ್ತಿತ್ವದ ಬಗ್ಗೆ ನಮಗೆ ತಿಳಿಯಿತು. ಹನ್ನೊಂದು ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ''ಕರ್ನಾಟಕದಲ್ಲಿನ ಪರಿಸ್ಥಿತಿಯ ಕುರಿತು ಪ್ರಧಾನಿ,, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಂತಹ ದೆಹಲಿ ನಾಯಕರಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣ ಮತ್ತು ಅದಕ್ಕೆ ಯಾರು ಹೊಣೆ ಎಂದು ಹೇಳುತ್ತೇನೆ ಎಂದರು. 

ಪಕ್ಷ ವಿರೋಧಿ" ಹೇಳಿಕೆಗಾಗಿ ಕರ್ನಾಟಕ ಬಿಜೆಪಿ ಗುರುವಾರ ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಿದೆ. ಪಕ್ಷದ ರಾಜ್ಯ ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟಿಸ್‌ಗೆ ಲಿಖಿತ ಉತ್ತರ ನೀಡಲು ಒಂದು ವಾರ ಕಾಲಾವಕಾಶ ನೀಡಲಾಗಿದೆ.
ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ನೀಡಿದ್ದ ನೋಟಿಸ್ ಅನ್ನು ಪಕ್ಷ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ರಾಜೀನಾಮೆ ನೀಡಬೇಕಿತ್ತು ಎಂದು ರೇಣುಕಾಚಾರ್ಯ ಗುರುವಾರ ಹೇಳಿದ್ದರು. ಯಾರೊಬ್ಬರನ್ನು ಹೆಸರನ್ನು ಉಲ್ಲೇಖಿಸದೇ  ಬಿಜೆಪಿ ಕಚೇರಿಯನ್ನು ಕಾರ್ಪೊರೇಟ್ ಕಚೇರಿಯನ್ನಾಗಿ ಮಾಡಲಾಗಿದೆ ಎಂದು  ಆರೋಪಿಸಿದ್ದ ಅವರು, ಮುಂಬರುವ ಲೋಕಸಭೆ ಮತ್ತು ಜಿಲ್ಲಾ, ತಾಲೂಕ್ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ  ಆತ್ಮಾವಲೋಕನ ಮಾಡಿಕೊಂಡು ಪಕ್ಷ ಬಲವರ್ಧನೆ ಹಾಗೂ ಕಾರ್ಯಕರ್ತರ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದ್ದರು. 

ಕಾಂಗ್ರೆಸ್ ಸೇರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿರುವ ರೇಣುಕಾಚಾರ್ಯ, ಯಡಿಯೂರಪ್ಪ ಅವರ ನಿರ್ದೇಶನದಂತೆ ಪಕ್ಷದಲ್ಲೇ ಇರುವುದಾಗಿ ಹೇಳಿದ್ದಾರೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com