ಧೈರ್ಯ ಇದ್ದರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಲಿ: ಮಾಜಿ ಸಚಿವ ಸುಧಾಕರ್ ಸವಾಲು

ಧೈರ್ಯ ಇದ್ದರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಲಿ ಎಂದು ಮಾಜಿ ಸಚಿವ ಸುಧಾಕರ್ ಅವರು ಸವಾಲು ಹಾಕಿದ್ದಾರೆ.
ಮಾಜಿ ಸಚಿವ ಸುಧಾಕರ್
ಮಾಜಿ ಸಚಿವ ಸುಧಾಕರ್
Updated on

ಬೆಂಗಳೂರು: ಧೈರ್ಯ ಇದ್ದರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಲಿ ಎಂದು ಮಾಜಿ ಸಚಿವ ಸುಧಾಕರ್ ಅವರು ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಹಾಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ವಾಗ್ದಾಳಿ ನಡೆಸಿದರು.

ಧೈರ್ಯ ಇದ್ದರೆ ಪ್ರದೀಪ್ ಈಶ್ವರ್​​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಲಿ. ನಾನು ಕೂಡ ಬಿಜೆಪಿಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧೆಸುತ್ತೇನೆ. ನಿನಗೆ ಎಷ್ಟು ಮತಗಳು ಬರುತ್ತದೆ? ನನಗೆ ಎಷ್ಟು ಮತ ಬರುತ್ತದೆ ನೋಡೋಣ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.

ಈ ಹಿಂದೆ ನಾನು ಒಂದೇ ವರ್ಷದಲ್ಲಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದೆ. ರಾಜೀನಾಮೆ ನೀಡಿ ಬಿಜೆಪಿ ಇಲ್ಲದ ಕಡೆ ಗೆದ್ದು ನನ್ನ ಶಕ್ತಿ ತೋರಿಸಿದ್ದೇನೆ. ನೀನು ಕಾಂಗ್ರೆಸ್ ಪಕ್ಷದ ಬದಲು ಸ್ವತಂತ್ರವಾಗಿ ಸ್ಪರ್ಧಿಸಿ ತೋರಿಸು. ಪ್ರದೀಪ್ ಈಶ್ವರ್​​ ಮುಖ ನೋಡಿದರೆ 5 ಸಾವಿರ ವೋಟು ಬರಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಅಶಾಂತಿ, ಅತ್ಯಾಚಾರ, ಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿ ಯಾವತ್ತೂ ಕೂಡ ಜೈನಮುನಿ ಹತ್ಯೆ ಆಗಿರಲಿಲ್ಲ. ಜೈನ ಮುನಿ ಹತ್ಯೆಗೆ ರಾಜ್ಯ ಖ್ಯಾತಿಯಾಗಿದೆ. ರಾಜ್ಯದಲ್ಲಿ ಐಟಿ ಕಂಪನಿಯ ಮುಖ್ಯಸ್ಥರ ಕೊಲೆಯಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾನವೀಯತೆ ಇದ್ದರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹಣ ನೀಡಿ. ನಿರ್ಮಾಣ ಹಂತದ ಮೆಡಿಕಲ್ ಕಾಲೇಜುಗಳಿಗೆ ಮೊದಲು ಹಣ ನೀಡಿ. ಗುತ್ತಿಗೆದಾರರಿಂದ ಕಾಲೇಜುಗಳನ್ನು ಪಡೆದು ವಿದ್ಯಾರ್ಥಿಗಳಿಗೆ ನೆರವಾಗಿ. ಸಿಎಂ ಸಿದ್ದರಾಮಯ್ಯಗೆ ಮಾನವೀಯತೆ ಇದ್ದರೆ, ಈ ಕೆಲಸ ಮಾಡಲಿ ಎಂದರು.

ಇದೇ ವೇಳೆ ಮೆಡಿಕಲ್​ ಕಾಲೇಜುಗಳ ಬಗ್ಗೆ ತನಿಖೆಗೆ ಸರ್ಕಾರ ಚಿಂತನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನಾನು ಅವ್ಯವಹಾರ, ಹಗರಣ ಮಾಡಿದ್ರೆ ನನಗೆ ಕಠಿಣ ಶಿಕ್ಷೆ ವಿಧಿಸಿ. ನನ್ನ ಮೇಲಿನ ಸೇಡಿಗೆ ಮೆಡಿಕಲ್​​ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಬೇಡಿ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com